ದೇಶ

ಭಾರತದ ಅಸಮಾಧಾನಕ್ಕೆ ಕಾರಣವಾದ 'ಸಬ್‌ಮೆರಿನ್‌'

Srinivasamurthy VN

ನವದೆಹಲಿ: ಚೀನಾದ ಸಬ್‌ಮೆರಿನ್‌ಗೆ ಶ್ರೀಲಂಕಾ ಸರ್ಕಾರ ಜಾಗ ಒದಗಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು.

2005ರಲ್ಲಿ ಅಧಿಕಾರಕ್ಕೇರಿದ ಮಹಿಂದಾ ರಾಜಪಕ್ಸೆ ಎಲ್‌ಟಿಟಿಇ ವಿರೋಧಿ ಎನ್ನುವುದು ಎಲ್ಲರಿಗೂ ಗೊತಿತ್ತು. ಆದರೆ ಅವರು ಮುಂದೆ ಹೋಗಿ ಭಾರತ ವಿರೋಧಿ ನಿಲುವು ತಳೆದಿದ್ದು ನೆರೆಯ ದೇಶವನ್ನು ಇರುಸುಮುರುಸುಗೆ ಗುರಿಯಾಗಿಸಿತ್ತು. ರಾಜಪಕ್ಸೆ 2 ವರ್ಷದ ಅಧಿಕಾರಾವಧಿಯಲ್ಲಿ ಏಳು ಬಾರಿ ಚೀನಾಗೆ ಹೋಗಿ ಬಂದಿದ್ದರು. ಎಲ್‌ಟಿಟಿಇ ಮಟ್ಟಹಾಕುವಲ್ಲಿ ಚೀನಾದ ನೆರವು ಪಡೆದರು.

ಅಭಿವೃದ್ದಿಯಲ್ಲೂ ನೆರೆಯ ಭಾರತವನ್ನು ಬದಿಗಿಟ್ಟು ಚೀನಾವನ್ನು ಹತ್ತಿರ ಕರೆದರು. ಈ ವಿಚಾರ ಭಾರತಕ್ಕೆ ಸ್ವಲ್ಪಮಟ್ಟಿಗಿನ ತಲೆನೋವು ತಂದಿಟ್ಟಿದ್ದರೂ ಆತಂಕಪಡುವಂಥದ್ದೇನೂ ಇರಲಿಲ್ಲ. ಆದರೆ, ನಿಜವಾದ ಆತಂಕ ಶುರುವಾದದ್ದು ಚೀನಾದ ಜಲಾಂತರ್ಗಾಮಿಗಳಿಂದ. ಯಾವಾಗ ಚೀನಾದ ಜಲಾಂತರ್ಗಾಮಿಗಳಿಗೆ ಶ್ರೀಲಂಕಾ ನೆಲೆ ಒದಗಿಸಿತೋ ಆಗಲೇ ಭಾರತಕ್ಕೆ ಆತಂಕ ಶುರುವಾಗಿದ್ದು, ನೆರೆಯ ರಾಷ್ಟ್ರದ ಅಭಿಪ್ರಾಯವನ್ನೂ ಕೇಳದೆ ರಾಜಪಕ್ಸೆ ಈ ರೀತಿಯ ಆಟವಾಡಿದ್ದು ಭಾರತವನ್ನು ತೀವ್ರವಾಗಿ ಕೆರಳಿಸಿತು. ಈ ವಿಚಾರವಾಗಿ ಪ್ರಧಾನಿ ಮೋದಿ ಅವರು ರಾಜಪಕ್ಸೆ ಅವರಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದರು.

ಆದರೆ, ರಾಜಪಕ್ಸೆ ಅಷ್ಟೊತ್ತಿಗಾಗಲೇ ಚೀನಾದ ಆಟದ ಗೊಂಬೆಯಾಗಿ ಬಿಟ್ಟಿದ್ದರು. ಮೂಲಗಳ ಪ್ರಕಾರ ಈ ವೇಳೆಯಲ್ಲೇ ಭಾರತ ಶ್ರೀಲಂಕಾದ ರಾಜಕೀಯದಲ್ಲಿ ಹೆಚ್ಚು ಕುತೂಹಲ ಬೆಳೆಸಿಕೊಂಡದ್ದು, ಪ್ರತಿಪಕ್ಷಗಳ ಬೆನ್ನಿಗೆ ನಿಂತದ್ದು. ಶ್ರೀಲಂಕಾದ ಮಾಧ್ಯಮದ ವರದಿಯನ್ನೇ ನಂಬುವುದಾದರೆ ರಾಜಪಕ್ಸೆಯನ್ನು ಮಣಿಸುವಲ್ಲಿ 'ರಾ' ದ ಅಧಿಕಾರಿ. ಶ್ರೀಲಂಕಾದಲ್ಲಿ ಒಳಗೊಳಗೆ ನಡೆಯುತ್ತಿದ್ದ ಈ ರಾಜಕೀಯ ಬದಲಾವಣೆಯನ್ನು ಅರಿತುಕೊಳ್ಳುವಲ್ಲಿ ವಿಳಂಬ ಮಾಡಿದಕ್ಕೇ ಚೀನಾ ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಮೈತ್ರಿಪಾಲ ಸಿರಿಸೇನೆ ನೇತೃತ್ವದ ಪ್ರತಿಪಕ್ಷ ಶ್ರೀಲಂಕಾವನ್ನು ಮತ್ತೊಂದು ವಸಾಹತು (ಚೀನಾದ ಕಾಲನಿ) ಮಾಡಲು ಬಿಡಲ್ಲ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಾಗಲೇ ಚೀನಾ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಪರಿಣಾಮ ಸಿರಿಸೇನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚೀನಾವಿರೋಧಿ ನಿಲುವು ತಳೆಯುವ ಸ್ಪಷ್ಟ ಸೂಚನೆಯನ್ನೂ ಅವರು ಈಗಾಗಲೇ ತಳೆದಿದ್ದಾರೆ.

SCROLL FOR NEXT