ದೇಶ

ಸುನಂದಾ ಸಾವು: ಅಮರ್ ಸಿಂಗ್ ವಿಚಾರಣೆ

ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿಂದೆ ವಿಚಾರಣೆ ನಡೆಸುತ್ತಿರುವ ದೆಹಲಿಯ ಎಸ್‌ಐಟಿ ಪೊಲೀಸರು ಬುಧವಾರ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಸುನಂದಾ ಪುಷ್ಕರ್ ಹತ್ಯೆಯಾಗುವ ಎರಡು ದಿನಗಳ ಮುಂದೆ ನನಗೆ ಕರೆ ಮಾಡಿ ಐಪಿಎಲ್ ವಿವಾದದಬಗ್ಗೆ ಚರ್ಚಿಸಿದ್ದರು ಎಂದು ಮಾಧ್ಯಮಗಳ ಮುಂದೆ ಅಮರ್ ಸಿಂಗ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಗಂಭಿರವಾಗಿ ಪರಿಗಣಿಸಿದ್ದ ದೆಹಲಿಯ ಎಸ್‌ಐಟಿ ಪೊಲೀಸರು, ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿಗಳೇನಾದರೂ ಅವರ ಬಳಿ ಸಿಗಬಹುದೆಂದು ತಿಳಿದು ಇಂದು ಅಮರ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.

ವಿಚಾರಣೆ ಕುರಿತಂತೆ ಅಮರ್ ಸಿಂಗ್ ಸ್ಪಷ್ಟನೆ
ಸುನಂದಾ ಹಾಗೂ ಶಶಿ ತರೂರ್ ನಡುವಣ ಸಂಬಂಧದ ಕುರಿತು ಪೊಲೀಸರು ನನ್ನನ್ನು ಪ್ರಶ್ನೆ ಮಾಡಿದರು ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.

ಪೊಲೀಸರ ವಿಚಾರಣೆ ಕುರಿತಂತೆ ಸ್ಪಷ್ಟನೆ ನೀಡಿರುವ ಅಮರ್ ಸಿಂಗ್, ವಿಚಾರಣೆ ವೇಳೆ ಪೊಲೀಸರು ಸುನಂದಾ ಸಾವು ಕುರಿತಂತೆ ನಾನು ನೀಡಿದ್ದ ಹೇಳಿಕೆಗಳ ಕುರಿತು ಸ್ಪಷ್ಟನೆ ಕೇಳಿದರು. ಅಲ್ಲದೆ, ಸುನಂದಾ ಹಾಗೂ ಶಶಿ ತರೂರ್ ಅವರ ಸಂಬಂಧ, ಪ್ರಕರಣದಲ್ಲಿ ಐಪಿಎಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರು. ಸುನಂದಾ ಸಾಯುವುದಕ್ಕೂ 2 ದಿನಗಳ ಹಿಂದೆ ಐಪಿಎಲ್ ಕುರಿತಂತೆ ನನ್ನೊಂದಿಗೆ ಮಾತನಾಡಬೇಕೆಂದು ಹೇಳುತ್ತಿದ್ದರು. ಆದರೆ ಸುನಂದಾ ಐಪಿಎಲ್ ಬಗ್ಗೆ ನನ್ನ ಬಳಿ ಏನು ಹೇಳಬೇಕು ಎಂದುಕೊಂಡಿದ್ದರು ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ದೆಹಲಿಯ ಚಾಣಕ್ಯಪುರಿಯ ಲೀಲಾ ಪ್ಯಾಲೆಸ್ ಪಂಚತಾರಾ ಹೋಟೆಲ್‌ನ ರೂಮ್ ನಂ.345ರಲ್ಲಿ ಜನವರಿ 17ರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದರು.

SCROLL FOR NEXT