ದೇಶ

ಗಡಿ ನುಸಳಲು ಯತ್ನಿಸಿದ ಐವರು ಉಗ್ರರ ಹತ್ಯೆ, ಓರ್ವ ಯೋಧ ಸಾವು

Lingaraj Badiger

ಶ್ರೀನಗರ: ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ಗಡಿ ನಿಯಂತ್ರ ರೇಖೆ(ಎಲ್‌ಒಸಿ)ಯ ಬಳಿ ಅಕ್ರಮವಾಗಿ ಗಡಿ ಪ್ರವೇಶಿಸಲು ಯತ್ನಿಸಿದ ಐವರು ಉಗ್ರರನ್ನು ಸೇನಾಪಡೆ ಹತ್ಯೆ ಮಾಡಿದೆ. ಉಗ್ರರೊಂದಿಗೆ ನಡೆದ ಎನ್‌ಕೌಂಟರ್ ವೇಳೆ ಓರ್ವ ಯೋಧ ಸಹ ಮೃತಪಟ್ಟಿರುವುದಾಗಿ ಸೇನೆ ತಿಳಿಸಿದೆ.

'ಎಲ್‌ಒಸಿ ಬಳಿ ಉಗ್ರರ ಚಲನವಲನದ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸೇನೆ ಅಲರ್ಟ್ ಆಗಿತ್ತು. ಆದರೆ ಶಸ್ತ್ರಸಜ್ಜಿತ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರಿಂದ ಎನ್‌ಕೌಂಟರ್ ಮಾಡಬೇಕಾಯಿತು. ಈ ಎನ್‌ಕೌಂಟರ್‌ನಲ್ಲಿ ಐವರು ಉಗ್ರರು ಹತ್ಯೆಯಾಗಿದ್ದಾರೆ. ಅಲ್ಲದೆ ನಾವು ಸಹ ಒಬ್ಬ ಯೋಧನನ್ನು ಕಳೆದುಕೊಂಡಿದ್ದೇವೆ ಎಂದು ಸೇನಾಪಡೆಯ ಹಿರಿಯ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸರಿಯಾದ ಸಮಯಕ್ಕೆ ಸೇನಾಪಡೆ ಕಾರ್ಯಾಚರಣೆ ನಡೆಸಿದ್ದರಿಂದ ಪ್ರಮುಖ ಒಳನುಸುಳುವಿಕೆಯನ್ನು ತಡೆದಂತಾಗಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಅಕ್ರಮವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ಗೆರಿಲ್ಲಾಗಳ ಗುಂಪಿನಲ್ಲಿದ್ದ ಕೆಲವರು ಮರಳಿ ಓಡಿಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.

SCROLL FOR NEXT