ಅಹಮದಾಬಾದ್: ಬಹುಕೋಟಿ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಸೂರತ್ ಮೂಲಕ ದುಬೈನ ಉದ್ಯಮಿ ಮನೀಷ್ ಷಾರನ್ನು ಗುರುವಾರ ಬಂಧಿಸಿದೆ. ಇಡಿ ಅಧಿಕಾರಿಗಳು ಷಾರನ್ನು ಶುಕ್ರವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹತ್ತು ದಿನ ತಮ್ಮ ಸುಪರ್ದಿಗೆ ವಹಿಸುವಂತೆ ಮನವಿ ಮಾಡಿದರು. ಷಾ ತನ್ನ ಪರ ವಾದಿಸಲು ವಕೀಲರನ್ನು ನೇಮಿಸಿಕೊಂಡಿಲ್ಲದಿರುವುದರಿಂದ ಶನಿವಾರ ಹಾಜರು ಪಡಿಸುವಂತೆ ಸೂಚಿಸಿದರು. ಷಾ ದುಬೈನಲ್ಲಿ ವಾಣಿಜ್ಯ ಸಂಸ್ಥೆ ನಡೆಸುತ್ತಿದ್ದು ಈ ಹಗರಣದ ಪ್ರಮುಖ ಆರೋಪಿಗಳಾದ ಅಫ್ರೋಡ್ ಫಟ್ಟಾ ಮತ್ತು ಮದನ್ಲಾಲ್ ಜೈನ್ ರಿಂದ ಹಲವಾರು ಹಾದಿಗಳಲ್ಲಿ ರು. 700 ಕೋಟಿ ಪಡೆದಿದ್ದಾರೆ. ಷಾ ರು. 5,395 ಕೋಟಿ ಮೌಲ್ಯದ ಹವಾಲ ಹಗರಣ ನಡೆಸಿದ್ದಾರೆ ಎಂದು ಇಡಿ ಪರ ವಕೀಲ ಸುಧೀರ್ ಗುಪ್ತ ಹೇಳಿದ್ದಾರೆ. ಜೈನ್ ಪರವಾಗಿ ಷಾ ದುಬೈನಲ್ಲಿ ಕಂಪನಿ ನಡೆಸುತ್ತಿದ್ದು, ದುಬೈ ಮೂಲದ ಹವಾಲ ಏಜೆನ್ಸಿಗಳ ಮೂಲಕ ಫಟ್ಟಾ ಮತ್ತು ಜೈನ್ ನಡೆಸುತ್ತಿರುವ ಕಂಪನಿಗಳಿಂದ ಹಣ ವರ್ಗಾವಣೆ ಮಾಡಿದ್ದಾನೆ ಎಂದು ಗುಪ್ತ ತಿಳಿಸಿದ್ದಾರೆ.