ದೇಶ

ವ್ಯಾಪಂ ಹಗರಣ: ಬಿಜೆಪಿ ನಾಯಕರ ಹೇಳಿಕೆ ಖಂಡಿಸಿದ ಜೆಡಿ(ಯು)

ನವದೆಹಲಿ: ಮಧ್ಯಪ್ರದೇಶದ ಬಹುಕೋಟಿ ಹಾಗೂ ನಿಗೂಢ ಸಾವುಗಳ ಪ್ರಕರಣ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ನಂದಕುಮಾರ್ ಸಿಂಗ್ ಚೌಹಾಣ್ ನೀಡಿದ್ದ ಹೇಳಿಕೆಯನ್ನು  ಸಂಯುಕ್ತ ಜನತಾದಳ ಪಕ್ಷ ಸೋಮವಾರ ಖಂಡಿಸಿದೆ.

ವ್ಯಾಪಂ ಹಗರಣದ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ನಾಯಕ ನಂದಕುಮಾರ್ ಸಿಂಗ್ ಚೌಹಾಣ್ ಅವರು, ಪ್ರಕರಣ ಸಂಬಂಧ ನಮಗೆ ಯಾವುದೇ ರೀತಿಯ ವಿಷಾದವಿಲ್ಲ. ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜೆಡಿ(ಯು) ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಅವರು, ಬಿಜೆಪಿ ಪಕ್ಷದ ನಾಯಕರು ನೀಡುತ್ತಿರುವ ಈ ರೀತಿಯ ಹೇಳಿಕೆಗಳು ಸಿಬಿಐ ತನಿಖೆಯ ಮೇಲೆ ಪರಿಣಾಮ ಬೀರಲಿದ್ದು, ಕೂಡಲೇ ಇಂತಹ  ಹೇಳಿಕೆ ನೀಡುವುದನ್ನು ನಾಯಕರು ಬಿಡಬೇಕೆಂದು ಹೇಳಿದ್ದಾರೆ.

ಮಧ್ಯಪ್ರದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನಿಗೂಢ ಸಾವಿನ ಪ್ರಕರಣ ಬಹುಕೋಟಿ ವ್ಯಾಪಂ ಹಗರಣವನ್ನು ಸಿಬಿಐ ತನಿಖಾ ತಂಡ ಇಂದಿನಿಂದ ತನ್ನ ತನಿಖೆಯನ್ನು ಆರಂಭಿಸಿದ್ದಾರೆ. ತನಿಖಾ ತಂಡದ ಸದಸ್ಯರು ದೆಹಲಿಯಿಂದ ಭೂಪಾಲ್ ಗೆ ತೆರಳಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ವ್ಯಾಪಂ ಹಗರಣವನ್ನು ತನಿಖೆ ನಡೆಸಲು ಸಿಬಿಐ ತಂಡದ 40 ಸದಸ್ಯರನ್ನು ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT