ದೇಶ

ಶಿವಾಜಿ ಇತಿಹಾಸವನ್ನು ತಿರುಚಿದ ತೆಲಂಗಾಣ ಸರ್ಕಾರ: ಹಿಂದು ಜನಜಾಗೃತಿ ಸಮಿತಿ ಆರೋಪ

Srinivas Rao BV

ಮುಂಬೈ: ಭಾರತದ ಇತಿಹಾಸವನ್ನು ತಿರುಚಲಾಗಿದೆ ಎಂದು ಕೆಲ ಸಂಘಟನೆಗಳು ನಿರಂತರವಾಗಿ ಆರೋಪಿಸುತ್ತಿವೆ. ಇತ್ತೀಚೆಗಷ್ಟೇ ಅಸ್ಥಿತ್ವಕ್ಕೆ ಬಂದ ತೆಲಂಗಾಣ ರಾಜ್ಯವನ್ನೂ ಈ ಇತಿಹಾಸ ತಿರುಚಿರುವ ಆರೋಪ ಬಿಟ್ಟಿಲ್ಲ.

ತೆಲಂಗಾಣದಲ್ಲಿ 6 ನೇ ತರಗತಿಯ ಪಠ್ಯದಲ್ಲಿ ಮರಾಠ ರಾಜ ಛತ್ರಪತಿ ಶಿವಾಜಿ ಕುರಿತ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿ ಆರೋಪಿಸಿದೆ. ತೆಲಂಗಾಣ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಸಮಿತಿ, ತಕ್ಷಣವೇ ತಿರುಚಲಾಗಿರುವ ಶಿವಾಜಿ ಇತಿಹಾಸವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದೆ.

ಹಿಂದು ಜನಜಾಗೃತಿ ಆರೋಪದ ಪ್ರಕಾರ, 6 ನೇ  ತರಗತಿಯ ಪಠ್ಯದ ದಿ ಲಾಸ್ಟ್ ಕ್ಯಾಸ್ಕೆಟ್ ಎಂಬ ಪಾಠದಲ್ಲಿ ಶಿವಾಜಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆಯಂತೆ. ಬ್ರಿಟೀಷ್ ಸೈನಿಕ ಜಾನ್ ಎಂಬುವವನು ಶಿವಾಜಿ ಜೀವ ಉಳಿಸಿದ್ದ, ಇದಕ್ಕೆ ಪ್ರತಿಯಾಗಿ ಶಿವಾಜಿ ತಾನು ಬ್ರಿಟೀಷರ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡಿದ್ದ  ಕ್ಯಾಸ್ಕೆಟ್ ನ್ನು ಸೈನಿಕನಿಗೆ ಉಡುಗೊರೆಯಾಗಿ ನೀಡಿದ್ದ ಎಂದು ಪಠ್ಯದಲ್ಲಿ ತಿಳಿಸಲಾಗಿದೆ. ಆದರೆ ಇದನ್ನು ವಿರೋಧಿಸಿರುವ ಹಿಂದು ಜನಜಾಗೃತಿ ಸಮಿತಿ ಜಾನ್ ಶಿವಾಜಿ  ಜೀವ ಉಳಿಸಿರಲಿಲ್ಲ ಎಂದು ಹೇಳಿದೆ.

ಶಿವಾಜಿ ವಶಪಡಿಸಿಒಕೊಂಡಿದ್ದ ಬೆಲೆ ಬಾಳುವ ಕ್ಯಾಸ್ಕೆಟ್ ನ್ನು ಹುಡುಕಿ ಹೊರಟ್ಟಿದ್ದ ಬ್ರಿಟೀಷ್ ಸೈನಿಕ ಜಾನ್, ರಾಯಗಢದಲ್ಲಿ ಶಿವಾಜಿ ದರ್ಬಾರಿಗೆ ಪ್ರವೇಶಿಸುತ್ತಾನೆ. ಆದರೆ ಅದನ್ನು ವಾಪಸ್ ನೀಡಲು ಶಿವಾಜಿ ಒಪ್ಪುವುದಿಲ್ಲ. ಆದರೆ ಮೂರು ದಿನಗಳ ಕಾಲ ರಾಯಗಢದಲ್ಲಿರಲು ಸೈನಿಕನಿಗೆ ಶಿವಾಜಿ ಅನುಮತಿ ನೀಡುತ್ತಾನೆ. ಈ ವೇಳೆ ಮರಾಠ ಸೈನಿಕನೊಬ್ಬನ ಮೇಲೆ ಶತೃಗಳು ಆಕ್ರಮಣ ಮಾಡುತ್ತಾರೆ. ಮರಾಠ ಸೈನಿಕನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಗಮನಿಸಿದ ಜಾನ್, ಅಪಾಯದಲ್ಲಿದ್ದ ಮರಾಠ ಸೈನಿಕನನ್ನು ಸಾವಿನ ದವಡೆಯಿಂದ ಪಾರು ಮಾಡುತ್ತಾನೆ. A ಮರಾಠ ಸೈನಿಕನೇ ಶಿವಾಜಿ ಎಂದು ಪಠ್ಯದಲ್ಲಿ ಬರೆಯಲಾಗಿದೆ.

ಇದರಿಂದ ಕೆರಳಿರುವ ಹಿಂದು ಜನಜಾಗೃತಿ ಸಮಿತಿ, ತೆಲಂಗಾಣ ಸರ್ಕಾರ, ಶಿವಾಜಿ ಇತಿಹಾಸವನ್ನು ತಿರುಚುವ ಮೂಲಕ ಕ್ರೈಸ್ತರನ್ನು ವೈಭವೀಕರಿಸಲು ಹೊರಟಿದೆ. ಪಠ್ಯದಲ್ಲಿ ದಾಖಲಾಗಿರುವ ಅಂಶಗಳು ಸುಳ್ಳಾಗಿದ್ದು ಕೂಡಲೇ ಬದಲಾಯಿಸಬೇಕೆಂದು ಆಗ್ರಹಿಸಿದೆ.

SCROLL FOR NEXT