ಹೈದರಾಬಾದ್: 2011ರಲ್ಲಿ ಆದಿವಾಸಿ ಬಾಲಕನೊಬ್ಬನನ್ನು ಅಪಹರಿಸಿದ್ದ ಗುಂಪು ಆತನನ್ನು 26 ವರ್ಷದ ಮಹಿಳೆ ಜೊತೆ ಬಲವಂತವಾಗಿ ವಿವಾಹ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದಿನ ನಲ್ಗೊಂಡಾ ಜಿಲ್ಲೆಯ ಪ್ರಸಾದ್ ಎಂಬ ಬಾಲಕನನ್ನು ದೇವರಕೊಂಡ ಬಸ್ ನಿಲ್ದಾಣದಿಂದ ಅಪಹರಿಸಿದ್ದ ರಾಮುಲು ಎಂಬಾತ ಗುತ್ತಿಗೆದಾರ ವೆಂಕಟೇಶ್ ಎಂಬಾತನ ಸುಪರ್ದಿಗೆ ನೀಡಿದ್ದ ಇದಾದ ಬಳಿಕ ಸುಮಾರು ನಾಲ್ಕು ವರ್ಷಗಳ ಕಾಲ ವೇತನ ನೀಡದೆ ಬಾಲಕಿನಿಂದ ದುಡಿಸಿಕೊಂಡಿದ್ದು ಅಲ್ಲದೆ 16ರ ಅಪ್ರಾಪ್ತ ಬಾಲಕನಿಗೆ 26 ವರ್ಷದ ಮಹಿಳೆಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.
ವಿಜಯವಾಡದ ಕೋತಪೇಟೆಯಲ್ಲಿ ಜೀತದಾಳಿನಂತೆ ಬಾಲಕನನ್ನು ದುಡಿಸಿಕೊಂಡಿದ್ದ ಆರೋಪಿಗಳು ಆತನಿಗೆ ವೇತನ ನೀಡುತ್ತಿರಲಿಲ್ಲವೆಂದು ಹೇಳಲಾಗಿದೆ. ಅಲ್ಲದೇ ಬಾಲಕನಿಗೆ ದಿನ ನಿತ್ಯ ದೈಹಿಕ ಹಿಂಸೆ ಸಹ ನೀಡಲಾಗುತ್ತಿತ್ತು ಎನ್ನಲಾಗಿದೆ.
ಬಾಲಕನ ವಿರೋಧದ ನಡುವೆಯೂ ಮೂರು ತಿಂಗಳ 26 ವರ್ಷದ ಮಹಿಳೆ ಜೊತೆ ವಿವಾಹ ನೆರವೇರಿಸಲಾಗಿದೆ. ಹೇಗೋ ಅವರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡ ಬಾಲಕ ತನ್ನ ಮೇಲಾದ ದೌರ್ಜನ್ಯದ ಕುರಿತು ಈಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾನೆ. ದಾಖಲೆಗಳ ಪ್ರಕಾರ ಬಾಲಕ ಪ್ರಸಾದ್ ನ ಜನ್ಮ ದಿನಾಂಕ ಜುಲೈ 22, 1999 ಎಂದು ತಿಳಿದುಬಂದಿದೆ.