ದೇಶ

ಹಣಕಾಸು ಸಚಿವಾಲಯಕ್ಕೂ ಗೂಢಚಾರಿಕೆ ಬಿಸಿ: ದೆಹಲಿಯ ಹಲವೆಡೆ ಸಿಬಿಐ ದಾಳಿ

ನವದೆಹಲಿ/ಮುಂಬೈ: ಪೆಟ್ರೋಲಿಯಂ ಸಚಿವಾಲಯವನ್ನು ಆವರಿಸಿಕೊಂಡ ಕಾರ್ಪೊರೇಟ್ ಗೂಢಚಾರಿಕೆ ಜಾಲ ಈಗ ಹಣಕಾಸು ಸಚಿವಾಲಯವನ್ನೂ ಆವರಿಸಿದೆ. ಜತೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಿಂದಲೂ ಪ್ರಮುಖ ದಾಖಲೆಗಳು ಸೋರಿಕೆಯಾಗಿವೆ.

ಈಗಾಗಲೇ ಬಜೆಟ್ ಭಾಷಣದ ಪ್ರತಿ ಸೋರಿಕೆಯಾಗಿತ್ತು ಎಂಬ ಗುಮಾನಿಯ ನಡುವೆ, ಮತ್ತೂ ಪ್ರಮುಖ ದಾಖಲೆಗಳು ಸೋರಿಕೆಯಾಗಿವೆ ಎಂದು ಹೇಳಲಾಗಿದೆ. ಈ ಘಟನೆ ಬಯಲಾಗುತ್ತಿದ್ದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಖಾಸಗಿ ಕಂಪನಿಗಳು, ಸಚಿವಾಲಯಗಳ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಕಚೇರಿ ಮೇಲೆ ದಾಳಿ ನಡೆಸಿರುವ ಕೇಂದ್ರ ತನಿಖಾ ದಳ ಸುಮಾರು ರು.60 ಲಕ್ಷ ನಗದುವಶಪಡಿಸಿಕೊಂಡಿದೆ. ಜತಗೆ ಮೂವರನ್ನು ವಶಕ್ಕೆ ತೆಗೆದುಕೊಂಡಿದೆ.

ಹೀಗಾಗಿ, ಈ ಪ್ರಕರಣ ಮತ್ತಷ್ಟು ಮಂದಿಯನ್ನು ಕತ್ತಲ ಕೋಣೆಗೆ ತಳ್ಳುವ ನಿರೀಕ್ಷೆ ಇದೆ. ಸಿಬಿಐ ಜತೆಗೆ ದೆಹಲಿ ಪೊಲೀಸರೂ ಕೂಡ ಗೂಢಚರ್ಯ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಧೀನ ಕಾರ್ಯದರ್ಶಿಗಳೇ: ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ಪ್ರಕಾರ ಹಣಕಾಸು ಮತ್ತು ವಾಣಿಜ್ಯ ಕೈಗಾರಿಕಾ ಸಚಿವಾಲಯದ ಅಧೀನ ಕಾರ್ಯದರ್ಶಿಗಳು (ಅಂಡರ್ ಸೆಕ್ರೆಟರಿ) ಬಹಳ ಎಚ್ಚರಿಯಿಂದಲೇ ಈ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆ, ಪ್ರಮುಖ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಅವರಿಗೆ ಸಿಗುತ್ತಿದ್ದವು. ಅವರು ಅದನ್ನು ಮಾರಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.

SCROLL FOR NEXT