ದೇಶ

101 ಜಲಮಾರ್ಗಗಳಿಗೆ ರಾಷ್ಟ್ರೀಯ ಮನ್ನಣೆ

Mainashree

ನವದೆಹಲಿ: ಮೋದಿ ಸರ್ಕಾರ ಆರಂಭದ ದಿನಗಳಲ್ಲಿ ಘೋಷಿಸಿದ್ದಂತೆ ಜಲ ಸಾರಿಗೆಗೆ ಉತ್ತೇಜನ ನೀಡಲು ಮುಂದಾಗಿದೆ. ಒಳನಾಡು ಸಾರಿಗೆಯಲ್ಲಿ ಹಾಲಿ ಬಳಕೆಯಾಗುತ್ತಿರುವ 101 ಜಲಮಾರ್ಗಗಳನ್ನು ರಾಷ್ಟ್ರೀಯ ಜಲ ಮಾರ್ಗ ಎಂದು ಘೋಷಿಸಲು ಕೇಂದ್ರ ತೀರ್ಮಾನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ. ಅಧಿಕ ಇಂಧನ ದಕ್ಷತೆ ಸಾಧಿಸಿ ಕಡಿಮೆ ಮಾಲಿನ್ಯ ಉಂಟುಮಾಡುವ ಜಲ ಸಾರಿಗೆಗೆ ಉತ್ತೇಜನ ನೀಡುವುದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜತೆಗೆ ಗಣನೀಯ ಪ್ರಮಾಣದಲ್ಲಿ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗಲಿದೆ.

ಜಲ ಮಾರ್ಗ ವಿಕಾಸ ಯೋಜನೆ ಅಡಿಯಲ್ಲಿ ಈ ಜಲಮಾರ್ಗಗಳ ಅಭಿವೃದ್ಧಿ ಕುರಿತು ಅಧ್ಯಯನ ನಡೆದಿತ್ತು. ಅಲ್ಲದೆ ಈ ಮಾರ್ಗಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ, ಸಂಭವನೀಯ ಹೂಡಿಕೆ ಪ್ರಮಾಣ, ವಾಣಿಜ್ಯ ವಹಿವಾಟುಗಳ ಸಾಧ್ಯತೆ ಕುರಿತಾಗಿಯೂ ವಿವರವಾದ ಅಧ್ಯಯನನ ನಡೆದಿತ್ತು.

ರಾಷ್ಟ್ರೀಯ ಜಲಮಾರ್ಗ ಎಂದು ಘೋಷಿಸಿರುವುದರಿಂದ ಸರಕು ಸಾಗಣೆಗೆ ಸಂಬಂ„ಸಿ ರಸ್ತೆ, ರೈಲು ಮತ್ತು ಜಲಸಾರಿಗೆಗಳ ನಡುವಿನ ಸಂಪರ್ಕ ಬಲಗೊಳ್ಳುವುದರಿಂದ ವಾಣಿಜ್ಯ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಇದರಿಂದ ದೇಶದ ಜಿಡಿಪಿ ಗಣನೀಯವಾಗಿ ಏರಲಿದೆ ಎಂದು ವರದಿ ತಿಳಿಸಿತ್ತು. ವಿಶೇಷವಾಗಿ ಬಾರ್ಜ್‍ಗಳ ನಿರ್ಮಾಣ, ನಿರ್ವಹಣೆ, ದುರಸ್ತಿ; ಬಂದರು ನಿಮರ್ಮಾಣ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ, ಉದ್ಯೋಗಾವಕಾಶಗಳು ವಿಶಾಲವಾಗಿ ಹೆಚ್ಚಲಿವೆ ಎಂದು ನಿರೀಕ್ಷಿಸಲಾಗಿದೆ. ಹಾಲಿ ಜಲಮಾರ್ಗಗಳು ಅಲಹಾಬಾದ್-ಹಲ್ದಿಯಾ (ಗಂಗಾ-ಭಾಗೀರಥಿ-ಹೂಗ್ಲಿ, 1620 ಕಿ.ಮೀ) ದುಬ್ರಿ-ಸದಿಯಾ (ಬ್ರಹ್ಮಪುತ್ರಾ 891 ಕಿ.ಮೀ) ಕೊಟ್ಟಪ್ಪುರಂ-ಕೊಲ್ಲಂ (ಉದ್ಯೋಗಮಂಡಲ್ ಮತ್ತು ಚಂಪಕಾರಾ ಕಾಲುವೆಗಳು, 205 ಕಿ.ಮೀ) ಕಾಕಿನಾಡ-ಪಾಂಡಿಚೇರಿ (ಗೋದಾವರಿ, ಕೃಷ್ಣಾ, 1078 ಕಿ.ಮೀ) ಬ್ರಹ್ಮಣಿ, ಮಹಾನದಿ 508 ಕಿ.ಮೀ.

ಸುಗ್ರೀವಾಜ್ಞೆ ತಿದ್ದುಪಡಿಗೆ ಒಪ್ಪಿಗೆ
ಭೂಸ್ವಾಧೀನ ಸುಗ್ರೀವಾಜ್ಞೆಗೆ ಸೂಚಿಸಲಾಗಿರುವ ಕೆಲವೊಂದು ಮರು ತಿದ್ದುಪಡಿಗಳಿಗೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿ ಈ ಮೂಲಕ ಏ.5ರಂದು ಮುಕ್ತಾಯವಾಗುವ ಸುಗ್ರೀವಾಜ್ಞೆಯನ್ನು ಮತ್ತೊಮ್ಮೆ ಮುಂದುವರಿಸುವ ಸೂಚನೆಯನ್ನು ಸರ್ಕಾರ ನೀಡಿದೆ. ಅದಕ್ಕಾಗಿ ಲೋಕಸಭೆ ಅಥವಾ ರಾಜ್ಯಸಭೆಯ ಪೈಕಿ ಒಂದನ್ನು ಮುಂದೂಡುವ ಇರಾದೆ ಸರ್ಕಾರದ್ದು. ಈ ಮೂಲಕ ಈಗಾಗಲೇ ಹಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಏ.5ರಂದು ವಿವಾದಾತ್ಮ ನಿರ್ಧಾರ ರದ್ದಾಗುವಂತೆ ಮಾಡಲು ಮುಂದಾಗಿದೆ ಎಂಬ ವರದಿಗಳನ್ನು ತಿರಸ್ಕರಿಸಿದೆ.

SCROLL FOR NEXT