ದೇಶ

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ: 5 ಸಾವು, 10 ಜನರಿಗೆ ಗಾಯ

Srinivasamurthy VN

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕಾರ್ಖಾನೆಯಲ್ಲಿದ್ದ 5 ಸಿಬ್ಬಂದಿಗಳು ಬೆಂಕಿಗೆ ಆಹುತಿಯಾಗಿದ್ದಾರೆ.

ವಿಶಾಖಪಟ್ಟಣಂನ ಎಸ್ ರಾಯವರಂ ತಾಲ್ಲೂಕಿನ ಗೋಕುಲ ಪಾಡಿ ಗ್ರಾಮದಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಗ್ರಾಮದ ತೋಟದಲ್ಲಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಭಾನುವಾರ ಸಂಜೆ ಈ ಪಟಾಕಿ ತಯಾರಿಕ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ರಭಸಕ್ಕೆ ಪಟಾಕಿಗಳು ಒಮ್ಮೆಲೆ ಸ್ಫೋಟಗೊಂಡವು. ಪರಿಣಾಮ ಘಟಕದಲ್ಲಿದ್ದವರ ಪೈಕಿ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿ ಒಟ್ಟು 5 ಮಂದಿ ಸ್ಥಳದಲ್ಲಿಯೇ ಸಜೀವ ದಹನವಾದರು. ಮತ್ತೆ 10 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತರೆಲ್ಲರೂ ಗೋಕುಲಪಾಡು ಗ್ರಾಮದ ನಿವಾಸಿಗಳಾಗಿದ್ದು, ಮೃತರನ್ನು ಲಿಂಗಪಲ್ಲಿ ಶೇಷಮ್ಮ (45 ವರ್ಷ), ನೂತಿ ಸತ್ಯವತಿ (35 ವರ್ಷ), ಭೂಪತಿ ಸತ್ತಿಬಾಬು (45 ವರ್ಷ), ಭೂಪತಿ ಲೋವರಾಜು (38) ಮತ್ತು ಸಮ್ಮಂಗಿ ರಮಣ ಎಂದು ಗುರುತಿಸಲಾಗಿದೆ. ದುರ್ಘಟನೆ ಸಂಭವಿಸಿರುವ ಪಟಾಕಿ ಘಟಕದ ಮಾಲೀಕ ಮಡುಗುಲ ನಾನಾಜಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಪೊಲೀಸರು ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಗಾಯಾಳುಗಳನ್ನು ವಿಶಾಖಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಫೋಟದ ತೀವ್ರತೆಗೆ ಬಾವಿಗೆ ಬಿದ್ದ ವ್ಯಕ್ತಿ
ಇನ್ನು ಪಟಾಕಿ ಘಟಕದಲ್ಲಿ ಉಂಟಾದ ಸ್ಫೋಟದ ತೀವ್ರತೆಗೆ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬಾವಿಗೆ ಬಿದಿದ್ದಾನೆ ಎಂದು ತಿಳಿದುಬಂದಿದೆ. ಘಟಕದಲ್ಲಿ ಬೆಂಕಿ ಹತ್ತಿಕೊಂಡು ಸ್ಫೋಟಸಂಭವಿಸುವ ವೇಳೆ ಈತ ಪಕ್ಕದಲ್ಲಿಯೇ ಇದ್ದ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ದಿಢೀರನೆ ಸ್ಫೋಟ ಸಂಭವಿಸಿದ್ದು, ಈತ ಬಾವಿಗೆ ಬಿದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

SCROLL FOR NEXT