ದೇಶ

ಎನ್‍ಜೆಎಸಿ: ಅರ್ಜಿ ವಿಚಾರಣೆ ವಿಸ್ತೃತ ಪೀಠಕ್ಕಿಲ್ಲ

Rashmi Kasaragodu

ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ(ಎನ್‍ಜೆಎಸಿ) ಸ್ಥಾಪನೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು 9 ಅಥವಾ 11 ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಿಚಾರಣೆಯನ್ನು ಹಾಲಿ ಪೀಠದಮೂಲಕವೇ ಮುಂದಿನ ಪೀಠಕ್ಕೆ
ವರ್ಗಾಯಿಸಲಾಗುವುದು ಎಂದು ನ್ಯಾ. ಜೆ.ಎಸ್. ಖೆಹರ್ ನೇತೃತ್ವದ 5 ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಸರ್ಕಾರಕ್ಕೆ ತಿಳಿಸಿದೆ. ಎನ್‍ಜೆಎಸಿ ಕಾಯ್ದೆ  ವಿರುದ್ಧ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಫಾಲಿ ಎಸ್ ನಾರಿಮನ್, ರಾಮ್  ಜೇಠ್ಮಲಾನಿ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕ್ರಮಕ್ಕೆ ತೀವ್ರ  ಆಕ್ಷೇಪ  ವ್ಯಕ್ತಪಡಿಸಿದ್ದರು. ಈ ರೀತಿಯ ಪ್ರಯತ್ನ ಕೇಂದ್ರ ಅನುಸರಿಸುತ್ತಿರುವ ವಿಳಂಬ ತಂತ್ರದ ಭಾಗ ಎಂದು ವಾದಿಸಿದ್ದರು. ಇದಕ್ಕೂ ಮೊದಲು ಪ್ರಕರಣಕ್ಕೆ ಸಂಬಂಧಿ ಸಿ ಸೋಮವಾರ ನಡೆದ ವಿಚಾರಣೆ ವೇಳೆ ಕೊಲಿಜಿಯಂ ವ್ಯವಸ್ಥೆ ಮುಗಿದ ಕಥೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಒಂದು ವೇಳೆ ಸಂವಿಧಾನ ಪೀಠ ಎನ್ ಜೆಎಸಿಯನ್ನು ರದ್ದು ಮಾಡಿದರೂ ಕೊಲಿಜಿಯಂ ವ್ಯವಸ್ಥೆ ಮರುಸ್ಥಾಪಿಸಲು ಸಾಧ್ಯವಿಲ್ಲ. ಅಂಥ ಪರಿಸ್ಥಿತಿಯಲ್ಲಿ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿ ಸಂಸತ್ತು ಹೊಸ ಕಾನೂನು ತಿದ್ದುಪಡಿಗೆ ಮುಂದಾಗುತ್ತದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ತಿಳಿಸಿದ್ದರು.

SCROLL FOR NEXT