ದೇಶ

ಪಕ್ಷಿಗಳಿಗೂ ಮೂಲಭೂತ ಹಕ್ಕಿದೆ, ಪಂಜರದಲ್ಲಿ ಬಂಧಿಸಬೇಡಿ: ದೆಹಲಿ ಹೈಕೋರ್ಟ್

ನವದೆಹಲಿ: ಪಕ್ಷಿಗಳಿಗಳಿಗೂ ಗೌರವಯುತವಾಗಿ ಬದುಕುವ ಹಕ್ಕಿದ್ದು, ಅವುಗಳನ್ನು ಪಂಜರದಲ್ಲಿ ಬಂಧಿಸದೆ ಸ್ವತಂತ್ರವಾಗಿ ಆಕಾಶದಲ್ಲಿ ಹಾರಾಡುವಂತೆ ಬಿಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ವಿದೇಶಗಳಿಗೆ ಮಾರಾಟ ಮಾಡುವ ಸಲುವಾಗಿ ಪಕ್ಷಿಗಳನ್ನು ಪಂಜರದೊಳಗೆ ಬಂಧಿಸಿ ಅವುಗಳಿಗೆ ಆಹಾರ, ನೀರು ಹಾಗೂ ವೈದ್ಯಕೀಯ ಚಿಕಿತ್ಸೆಗಳನ್ನು ನೀಡದೆ ಎಂ.ಡಿ.ಮೊಹಜಿಮ್ ಎಂಬಾತ ಪ್ರಾಣಿ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಅರ್ಜಿಯೊಂದನ್ನು ಹಾಕಿತ್ತು. ಈ ಅರ್ಜಿಯನ್ನು ಸ್ವೀಕರಿಸಿದ ವಿಚಾರಣಾ ನ್ಯಾಯಾಲಯವು ಎನ್ ಜಿಒಗಳ ವಾದ ಕೇಳದೆಯೇ  ಎಂ.ಡಿ.ಮೊಹಜಿಮ್ ಅವರ ಪರವಾಗಿ ಆದೇಶ ನೀಡಿ ಮತ್ತೆ ಪಕ್ಷಿಗಳನ್ನು ಆತನ ವಶಕ್ಕೆ ನೀಡಿತ್ತು ಎಂದು ಹೇಳಿದ ಎನ್ ಜಿಒ ಸಂಸ್ಥೆ ವಿಚಾರಣಾ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಎನ್ ಜಿಒ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಕುರಿತಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಮನಮೋಹನ್ ಸಿಂಗ್ ಅವರಿದ್ದ ಪೀಠ, ಪಕ್ಷಿಗಳಿಗೆ ಆಕಾಶದಲ್ಲಿ ಹಾರಾಡುವ ಹಕ್ಕಿದೆ. ವ್ಯವಹಾರಕ್ಕಾಗಿ ಅಥವಾ ಇನ್ನಾವುದೇ ಕೆಲಸಕ್ಕಾಗಿ ಅವುಗಳನ್ನು ಹಿಡಿದು ಪಂಜರದಲ್ಲಿ ಕೂಡಿ ಹಾಕಿ, ಅವುಗಳ ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಮನುಷ್ಯರಿಗಿಲ್ಲ. ಪಕ್ಷಿಗಳಿಗೆ ಮೂಲಭೂತ ಹಕ್ಕಿರುವುದರಿಂದ ಅವುಗಳ ಮೇಲಿನ ದೌರ್ಜನ್ಯ ಸರಿಯಲ್ಲ ಎಂದು ಹೇಳಿದೆ.

ಇದೇ ವೇಳೆ ದೆಹಲಿ ಪೊಲೀಸರಿಗೆ ಹಾಗೂ ಪಕ್ಷಿಗಳನ್ನು ಮಾರಾಟ ಮಾಡುತ್ತಿದ್ದ ಮಾಲೀಕ ಎಂ.ಡಿ.ಮೊಹಜಿಮ್ ಅವರಿಗೆ ನೋಟಿಸ್ ಜಾರಿ ಮಾಡಿರುವ ದೆಹಲಿ ಹೈಕೋರ್ಟ್ ಮೇ.28ರ ಒಳಗೆ ಉತ್ತರ ನೀಡುವಂತೆ ತಿಳಿಸಿದೆ.

SCROLL FOR NEXT