ಪಾಟ್ನಾ: ದಾದ್ರಿ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಗಳು ಮುಂದುವರೆದಿದ್ದು, ಗೋಮಾಂಸ ವಿವಾದವನ್ನು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಬಿಹಾರಕ್ಕೆ ತರಲು ಯತ್ನಿಸುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಯಾವುದೇ ಅಜೆಂಡ ಇಲ್ಲ ಎಂದಿರುವ ನಿತಿಶ್ ಕುಮಾರ್, ಗೋಮಾಂಸ ವಿವಾದವನ್ನು ಬಿಹಾರಕ್ಕೆ ವರ್ಗಾಯಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಖಾಸಗಿ ಸುದ್ದಿ ವಾಹನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ದಾದ್ರಿ ಘಟನೆ ಬಿಹಾರ ಚುನಾವಣಾ ವಿಷಯ ಅಲ್ಲ. ಆದರೆ ಕೋಮು ಗಲಭೆ ಆಧಾರದ ಮೇಲೆ ಮತಗಳ ಧೃವೀಕರಣ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸದ್ದಾರೆ.
ಇದೇ ವೇಳೆ ಬಿಹಾರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಬಿಹಾರ ಸಿಎಂ ಸವಾಲು ಹಾಕಿದ್ದಾರೆ. ಅಲ್ಲದೆ ಮೋದಿಗೆ ಸಮಾಜವನ್ನು ಒಡೆಯುವ ಏಕೈಕ ಅಜೆಂಡಾ ಇದೆ ಎಂದಿದ್ದಾರೆ.