ನವದೆಹಲಿ: ೨೦೦೨ರ ಗುಜರಾತ್ ಗಲಭೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಾತ್ರ ಇದೆ ಎಂದು ಆರೋಪಿಸಿ ಗುಜರಾತ್ ನ ಮಾಜಿ ಹಿರಿಯ ಪೊಲಿಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
೨೦೦೨ರ ಗುಜರಾತ್ ಗಲಭೆಯಲ್ಲಿ ಅಮಿತ್ ಶಾ ಪಾತ್ರವೂ ಇದ್ದು, ಅವರನ್ನು ತಾನು ದಾಖಲಿಸಿರುವ ದೂರಿನಲ್ಲಿ ಪಕ್ಷಗಾರರನ್ನಾಗಿಸಬೇಕೆಂದು ಸಂಜೀವ್ ಭಟ್ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರ ಅರ್ಜಿಯನ್ನು ತಿರಸ್ಕರಿಸಿದೆ.
ಗುಜರಾತ್ ನರಮೇಧಕ್ಕೆ ಸಂಬಂಧಿಸಿ, ತಾನು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಬಿಜೆಪಿ ಮುಖಂಡ ಅಮಿತ್ ಶಾರನ್ನೂ ಪಕ್ಷಗಾರರನ್ನಾಗಿಸಬೇಕು. ಅಲ್ಲದೇ, ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಹತ್ಯೆ ಪ್ರಕರಣ, ಸೊಹ್ರಾಬುದ್ದೀನ್ ಮತ್ತು ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣಗಳಲ್ಲಿ ಮೋದಿಯವರ ಆಪ್ತ ಅಮಿತ್ ಶಾ ಪಾತ್ರವಿದೆ. ಹಾಗಾಗಿ, ಈ ಬಗ್ಗೆ ಎಸ್ ಐಟಿ ತನಿಖೆಗೆ ಆದೇಶಿಸಬೇಕು ಎಂದು ಎಂದು ಮನವಿ ಮಾಡಿದ್ದರು.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಎಚ್ ಎಲ್ ದತ್ತು ಮತ್ತು ನ್ಯಾಯಾಮೂರ್ತಿ ಅರುಣ್ ಮಿಶ್ರಾ ಅವರನ್ನೊಳಗೊಂಡ ಪೀಠ ಸಂಜೀವ್ ಭಟ್ ಅರ್ಜಿ ತಿರಸ್ಕರಿಸಿದ್ದು, ಎಸ್ ಐಟಿ ತನಿಖೆಗೆ ಆದೇಶ ನೀಡಲು ನಿರಾಕರಿಸಿದೆ.