ನವದೆಹಲಿ: ದಾದ್ರಿ ಘಟನೆಯನ್ನು ಖಂಡಿಸಲು ಪ್ರಧಾನಿ ತುಂಬಾ ದುರ್ಬಲ ಪದಪುಂಜಗಳನ್ನು ಬಳಸಿದ್ದಾರೆ. ಅವರು ಇನ್ನಷ್ಟು ತೀಕ್ಷ್ಣ ಪದಗಳಲ್ಲಿ ಪ್ರಕರಣವನ್ನು ಖಂಡಿಸಬೇಕಿತ್ತು ಎಂದು ಬೆಂಗಳೂರಿನ ಇಂಗ್ಲಿಷ್ ಲೇಖಕಿ ಶಶಿ ದೇಶಪಾಂಡೆ ಒತ್ತಾಯಿಸಿದ್ದಾರೆ. ಲೇಖಕರ ಪ್ರಶಸ್ತಿ ಮರ ಸುವಿಕೆ ಮುಂದುವರಿದಿದೆ. ನಯನತಾರಾ ಸೆಹಗಲ್ ಕೂಡ ಪ್ರಧಾನಿಯನ್ನು ಟೀಕಿಸಿದ್ದು, ಟೀಕೆ- ಪ್ರತಿಟೀಕೆಗಳ ಸಮರದಲ್ಲಿ ಲೇಖಕರ ಜತೆಗೆ ನಟರೂ ಸೇರಿಕೊಂಡಿದ್ದಾರೆ. ಈ ಪ್ರಕರಣದ ಬಣ್ಣನೆಗೆ `ದುರದೃಷ್ಟಕರ' ಎಂಬುದು ತುಂಬದುರ್ಬಲ ಪದ. ಈ ದೇಶದ ಮುಖಂಡ ಈ ಪ್ರಕರಣದ ನೈತಿಕ ಹೊಣೆ ಹೊರಬೇಕು. ಇಲ್ಲಿನ ಜನತೆ ನಿಮ್ಮನ್ನು ಆರಿಸಿದ್ದಾರೆ. ನಿಮ್ಮ ಕೆಲವು ಮಾತುಗಳು
ಈ ದೇಶದಲ್ಲಿ ತುಂಬಾ ಬದಲಾವಣೆ ತರಬಲ್ಲವು ಎಂದು ಶಶಿ ದೇಶಪಾಂಡೆ ಹೇಳಿದ್ದಾರೆ. ಅವರು ಕಳೆದ ವಾರ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಶಶಿ ದೇಶಪಾಂಡೆಗೆ 1990ರಲ್ಲಿ ಅಕಾಡೆಮಿ ಪ್ರಶಸ್ತಿ ದೊರಕಿದೆ. ಹಲವು ಲೇಖಕರ ಸಮತಿಯೊಂದು ತನಗೆ ನೀಡಿದ ಪ್ರಶಸ್ತಿಯನ್ನು ಮರಳಿಸುವುದರಲ್ಲಿ ತನಗೆ ನಂಬಿಕೆಯಿಲ್ಲ ಎಂದಿರುವ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ವಿವಿಧ ಬಗೆಗಳ ಕುರಿತು ಮುಕ್ತ ಚರ್ಚೆಯಾದರೆ ಪ್ರತಿಭಟನೆಯ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯ ಎಂದು ನಂಬುಗೆ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿರುವ ಲೇಖಕಿ ನಯನತಾರಾ ಸೆಹಗಲ್, ಸದ್ಯ ಬಹುಮಂದಿ ದೇಶದ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ ಎಂದಿದ್ದಾರೆ.
ದಾರುವಾಲ ಪ್ರಶಸ್ತಿ ವಾಪಸ್: ಇಂಗ್ಲಿಷ್ ಕವಿ ಕೆ.ಕೆ.ದಾರುವಾಲ ತಮಗೆ ದೊರೆತ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಅಕಾಡೆಮಿ ಸಾಹಿತಿ ಗಳ ಜತೆಗೆ ನಿಂತಿಲ್ಲ, ಅದು ರಾಜಕೀಯ ಒತ್ತಡದಲ್ಲಿ ಸಿಲುಕಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಇದರೊಂದಿಗೆ, ಪ್ರಶಸ್ತಿ ಮರಳಿಸಿದ ಲೇಖಕರ ಸಂಖ್ಯೆ 30ಕ್ಕೂ ಮೀರಿದೆ.
ಲೇಖಕರಿಗೆ ರಾಜಕೀಯ ಉದ್ದೇಶ: ಖೇರ್ ಪ್ರಶಸ್ತಿ ಮರಳಿಸುತ್ತಿರುವ ಲೇಖಕರು ಪ್ರಧಾನಿಯನ್ನು ಮುಜುಗರದಲ್ಲಿ ಸಿಲುಕಿಸುವ ರಾಜಕೀಯ ಉದ್ದೇಶ ಹೊಂದಿದ್ದಾರೆ. ನಾನು ಅವರ ಉದ್ದೇಶವನ್ನು ಗೌರವಿಸಲಾರೆ. ತಸ್ಲಿಮ ನಸ್ರೀನ್ರ ಮೇಲೆ ದಾಳಿಯಾದಾಗ ಯಾರೂ ಪ್ರಶಸ್ತಿ ಮರಳಿಸುವ ಬಗ್ಗೆ ಯೋಚಿಸಿರಲಿಲ್ಲ. ಇದೊಂದು ಅಲೆ ಅಷ್ಟೇ ಎಂದು ನಟ
ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos