ದೇಶ

ಹಿಮಾಚಲದಲ್ಲೂ ವ್ಯಕ್ತಿಯ ಹತ್ಯೆ

Srinivasamurthy VN

ನವದೆಹಲಿ: ಉತ್ತರಪ್ರದೇಶದ ದಾದ್ರಿಯಲ್ಲಿ ಬೀಫ್ ತಿಂದಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬರನ್ನು ಕೊಂದ ಘಟನೆ ಇನ್ನೂ ಜನಮಾನಸದಲ್ಲಿ ಹಸಿರಾಗಿರುವಾಗಲೇ ಹಿಮಾಚಲಪ್ರದೇಶದಲ್ಲೂ  ಇದೇ ಮಾದರಿಯ ಘಟನೆ ನಡೆದಿದೆ.

ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಸ್ಥಳೀಯರು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ. ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿಯು ಉತ್ತರಪ್ರದೇಶದವನಾಗಿದ್ದು,  ಶಿಮ್ಲಾದಲ್ಲಿ ಈತನನ್ನು ಕೊಲೆ ಮಾಡಲಾಗಿದೆ. ಹತ್ಯೆಗೈದವರು ಭಜರಂಗ ದಳ ಕಾರ್ಯಕರ್ತರು ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ೫ ಹಸುಗಳು ಮತ್ತು ೧೦ ಎತ್ತುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅನ್ನು ಸ್ಥಳೀಯರು ಅಟ್ಟಿಸಿಕೊಂಡು ಹೋಗಿದ್ದಾರೆ.

ಅಪಾಯ ಅರಿತ ಟ್ರಕ್ ಚಾಲಕ ಹಿಂಬದಿಯಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ. ನಂತರ ಟ್ರಕ್ ಅನ್ನು ಅಲ್ಲೇ ನಿಲ್ಲಿಸಿ, ಹಿಂದಿದ್ದ ಹಸುಗಳನ್ನು ಅಲ್ಲೇ ಬಿಟ್ಟು ಹೋಗಲು ಯತ್ನಿಸಿದ್ದು, ಆ ಸಮಯದಲ್ಲಿ ಒಂದು ಹಸು ಗಾಯಗೊಂಡಿದೆ. ಬಳಿಕ ಅಲ್ಲಿಂದ ಓಡಿಹೋಗಲು ಯತ್ನಿಸಿದರೂ ಸ್ಥಳೀಯರು ಹಿಡಿದು, ತೀವ್ರ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್‌ನಲ್ಲಿದ್ದ ಇತರೆ ನಾಲ್ವರು ತಲೆಮರೆಸಿಕೊಂಡಿದ್ದರೂ, ಪೊಲೀಸರು ಹಾಗೂ ಸ್ಥಳೀಯರು ಸೇರಿ ಅವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಇದೇ ವೇಳೆ, ಮೃತ ನೂಮನ್‌ನ ಸಂಬಂಧಿ ಇಮ್ರಾನ್ ಅಸ್ಗರ್ ಎಂಬಾತ, ಭಜರಂಗದಳ ಕಾರ್ಯಕರ್ತರು ಟ್ರಕ್ ತಡೆದು ನಿಲ್ಲಿಸಿ, ಅತನನ್ನು ಹೊಡೆದು ಕೊಂದು ಹಾಕಿದ್ದಾರೆ.ಆಗ ತಾನೂ ಟ್ರಕ್‌ನಲ್ಲಿದ್ದೆ ಎಂದಿದ್ದಾನೆ.

SCROLL FOR NEXT