ದೇಶ

ದಲಿತ ಬಾಲಕನದ್ದು ಆತ್ಮಹತ್ಯೆ: ಹರ್ಯಾಣ ಸಿಎಂ ಕಟ್ಟರ್

Srinivas Rao BV

ಹರ್ಯಾಣ: ಹರ್ಯಾಣದ ಫರಿದಾಬಾದ್ ನ ಹಳ್ಳಿಯೊಂದರಲ್ಲಿ ನಡೆದಿರುವ ದಲಿತ ಬಾಲಕನ ನಿಗೂಢ ಸಾವಿನ ಬಗ್ಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ದಲಿತ ಬಾಲಕ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಹಣಕಾಸಿನ ವಿಚಾರ ಹಾಗೂ ಪಾರಿವಾಳ ಕಳ್ಳತನಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪ್ರಕರಣವನ್ನು ಇತ್ಯರ್ಥಗೊಳಿಸಿದ ಬಳಿಕ ಎರಡೂ ಕುಟುಂಬದವರು ವಾಪಸ್ ತೆರಳಿದ್ದರು. ಇತ್ಯರ್ಥಗೊಳಿಸಬೇಕಾದರೆ ಬಾಲಕನನ್ನು ವಿಚಾರಣೆಗೊಳಪಡಿಸಿರಲಿಲ್ಲ  ಎಂದಿದ್ದು ಮೃತ ದಲಿತ ಬಾಲಕನ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಕಟ್ಟರ್ ತಿಳಿಸಿದ್ದಾರೆ.
ಶವಪರೀಕ್ಷೆ ನಡೆಸಿರುವ ವೈದ್ಯರು ನೇಣುಬಿಗಿದಿರುವುದರಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ವರದಿ ನೀಡಿದ್ದು, ದೇಹದ ಮೇಲೆ ಗಾಯದ ಗುರುತುಗಳಿಲ್ಲ ಎಂದು ಹೇಳಿದ್ದಾರೆ.
ಪಾರಿವಾಳ ಕದ್ದ ಆರೋಪದಲ್ಲಿ ಬಾಲಕನನ್ನು ಪೊಲೀಸರು ಬಂಧಿಸಲಾಗಿತ್ತು. ಅಲ್ಲದೆ, ಆತನಿಗೆ ಚೆನ್ನಾಗಿ ಹೊಡಿದಿದ್ದರು ಎಂದು ಮನೆಯವರು ಆರೋಪ ಮಾಡಿದ್ದಾರೆ. ಅದೂ ಅಲ್ಲದೆ, ಬಾಲಕನನ್ನು ಬಿಡುಗಡೆ ಮಾಡಬೇಕೆಂದರೆ ಪೊಲೀಸರು 10 ಸಾವಿರ ರೂಪಾಯಿ ಕೇಳಿದ್ದರು. ಬಳಿಕ ಈ ಮೊತ್ತ 15 ಸಾವಿರಕ್ಕೆ ಏರಿದ್ದರು. ತೀರ ಬಡವರಾಗಿದ್ದ ದಲಿತ ಕುಟುಂಬದವರು ದುಡ್ಡು ಹೊಂದಿಸಿ ತರುವಷ್ಟರಲ್ಲಿ ಬಾಲಕನ ತಾಯಿಗೆ ನಿಮ್ಮ ಮಗ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದರು. ಆದರೆ, ಬೆಳಗ್ಗೆ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

SCROLL FOR NEXT