ದೇಶ

ಬಿಹಾರದಲ್ಲಿ ಪತ್ರಕರ್ತನ ಕಗ್ಗೊಲೆ

Srinivasamurthy VN

ಪಾಟ್ನಾ: ಉತ್ತರಪ್ರದೇಶದ ನಂತರ ಇದೀಗ ಬಿಹಾರದಲ್ಲಿ ಪತ್ರಕರ್ತನೋರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ಆತನ ಮನೆಗೇ ನುಗ್ಗಿ ದುಷ್ಕರ್ಮಿಗಳು ಗುಂಡಿನ ಸುರಿಮಳೆ  ಗೈಯ್ದಿದ್ದಾರೆ.

ಸ್ಥಳೀಯ ದೈನಿಕ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತನೊಬ್ಬನನ್ನು ಗಯಾದಲ್ಲಿರುವ ಆತನ ಮನೆಗೇ ನುಗ್ಗಿ ಹತ್ಯೆ ಮಾಡಲಾಗಿದೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ದೈನಿಕ ಜಾಗರಣ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಥಿಲೇಶ್ ಕುಮಾರ್ ಪಾಂಡೆ(40) ಶನಿವಾರ ಸಂಜೆ ಕೆಲಸ ಮುಗಿಸಿ ಗಯಾದಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದರು. ಮಿಥಿಲೇಶ್ ಮನೆಗೆ ಬರುವುದನ್ನೇ ಕಾದು ಕುಳಿತಿದ್ದ ಮೂವರು ದುಷ್ಕರ್ಮಿಗಳು ಆತ ಮನೆಯೊಳಗೆ ಬರುತ್ತಿದ್ದಂತೆಯೇ ಮನೆಗೆ ನುಗ್ಗಿ ಪಿಸ್ತೂಲಿನಿಂದ ಎರಡು ಬಾರಿ ಏಕಾಏಕಿ ಗುಂಡು ಹಾರಿಸಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಗುಂಡೇಟಿನಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಿಥಿಲೇಶ್ ನನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರದರೂ ಮಾರ್ಗ ಮಧ್ಯೆಯೇ ಮಿಥಿಲೇಶ್ ಸಾವನ್ನಪ್ಪಿದ್ದರು  ಎಂದು ತಿಳಿದುಬಂದಿದೆ. ಮೃತ ಪತ್ರಕರ್ತ ಮಿಥಿಲೇಶ್ ಅವರು ವಿವಾಹಿತರಾಗಿದ್ದು, ಪತ್ನಿ ಜ್ಯೋತಿ ದೇವಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆಂದು ಎಂದು ಗಯಾ ಎಸ್‍ಎಸ್‍ಪಿ ಮನು ಮಾಹಾರಾಜ್ ತಿಳಿಸಿದ್ದಾರೆ. ಕುಟುಂಬ ವರ್ಗದವರು ತಿಳಿಸಿರುವಂತೆ ಮಿಥಿಲೇಶ್ ಗೆ ಈ ಹಿಂದೆ ಅನೇಕ ಬಾರಿ ಬೆದರಿಕೆ ಕರೆಗಳು ಬಂದಿದ್ದವು.ಈ ಬಗ್ಗೆ ಮಿಥಿಲೇಶ್  ಕೂಡ ದೂರು ದಾಖಲಿಸಿದ್ದರು.

ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದೇ ನವೆಂಬರ್ 8ರಂದು 3ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಈ ನಡುವೆಯೇ ಪತ್ರಕರ್ತನ  ಹತ್ಯೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇತ್ತ ಈಗ್ಗೆ ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿಯೂ ಇಂತಹುದೇ ಘಟನೆ ಸಂಭವಿಸಿತ್ತು.

SCROLL FOR NEXT