ನವದೆಹಲಿ: ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಸಾಹಿತಿ, ಸಂಶೋಧಕ ಎಂ.ಎಂ. ಕಲ್ಬುರ್ಗಿ ಅವರ ಪ್ರಕರಣದಲ್ಲಿ ಶೀಘ್ರ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ದೆಹಲಿ ಮೂಲದ ಲೇಖಕರು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ಕರ್ನಾಟಕ ಭವನದ ಸ್ಥಾನೀಯ ಆಯುಕ್ತೆ ವಂದನಾ ಗುರ್ನಾನಿ ಮೂಲಕ ಸಾಹಿತಿಗಳು ಸಿಎಂಗೆ ಮನವಿ ಪತ್ರ ರವಾನಿಸಿದ್ದಾರೆ. ಹತ್ಯೆಯನ್ನು ನಾವು ಖಂಡಿಸುತ್ತೇವೆ. ಪ್ರಕರಣದ ವಿಚಾರಣೆ ತ್ವರಿತವಾಗಿ ಮುಗಿಸಲು ಹಾಗೂ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಜತೆಗೆ, ಕರ್ನಾಟಕದಲ್ಲಿ ವಾಕ್ ಹಾಗೂ ಚಿಂತನೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ಅವರು ಅನೇಕರ ವಿರೋಧಕ್ಕೆ ಕಾರಣವಾಗಿದ್ದರು. ತಮ್ಮದೇ ಸಮುದಾಯದ ಕೆಂಗಣ್ಣಿಗೂ ಗುರಿಯಾಗಿದ್ದರು. ಕರ್ನಾಟಕವು ವಿವಿಧ ಅಭಿಪ್ರಾಯಗಳಿಗೆ, ಸಹಿಷ್ಣುತೆಗೆ ಹೆಸರುವಾಸಿಯಾದ ರಾಜ್ಯ. ಅಲ್ಲೇ ಈ ರೀತಿಯ ಘಟನೆ ನಡೆದಿರುವುದು ಆಘಾತ ಮೂಡಿಸಿದೆ ಎಂದಿದ್ದಾರೆ.