ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇಸ್ಪತ್ ಪ್ರೖೆವೇಟ್ ಲಿಮಿಟೆಡ್.(ಜೆಐಪಿಎಲ್)ನ ನಿರ್ದೇಶಕ ಆರ್.ಎಸ್ ರಂಗ್ಟ ಹಾಗೂ ಆರ್.ಸಿ.ರಂಗ್ಟ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಮಾರ್ಚ್ 28ರಂದು ಕಲ್ಲಿದ್ದಲು ಹಗರಣದ ಮೊದಲ ತೀರ್ಪು ಪ್ರಕಟಿಸಿದ್ದ ಸಿಬಿಐ ನ್ಯಾಯಾಲಯ, ,ಆರ್.ಎಸ್ ರಂಗ್ಟ ಹಾಗೂ ಆರ್.ಸಿ.ರಂಗ್ಟ ಅವರು ತಪ್ಪಿತಸ್ಥರು ಎಂದು ಹೇಳಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದರಿಸಿತ್ತು. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಶರ್ ಅವರು, ಅಪರಾಧಿಗಳಿಗೆ ನಾಲ್ಕು ವರ್ಷ ಜೈಲು ಹಾಗೂ ತಲಾ 5ಲಕ್ಷ ದಂಡ ವಿಧಿಸಿದ್ದಾರೆ. ಅಲ್ಲದೆ ಜೆಐಪಿಎಲ್ ಕಂಪನಿ ಕೂಡ 25 ಲಕ್ಷ ರುಪಾಯಿ ದಂಡ ಕಟ್ಟಬೇಕು ಎಂದು ನ್ಯಾಯಾಲಯ ಆಜ್ಞಾಪಿಸಿದೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆಂದೇ ಸ್ಥಾಪಿಸಲಾದ ವಿಶೇಷ ನ್ಯಾಯಾಲಯ ತೀರ್ಪು ನೀಡಿದ ಮೊದಲ ಪ್ರಕರಣ ಇದಾಗಿದೆ.