ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ-ಬೆಸ ಸಾರಿಗೆ ನಿಯಮವನ್ನು ಉಲ್ಲಂಘಿಸಿದ ಬಿಜೆಪಿ ಸಂಸದ ವಿಜಯ್ ಗೋಯಲ್ ಅವರಿಗೆ ಸೋಮವಾರ ದೆಹಲಿ ಪೊಲೀಸರು 2000 ರುಪಾಯಿ ದಂಡ ವಿಧಿಸಿದ್ದಾರೆ.
ಅಶೋಕ್ ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ತೆರಳಿದ ಕೆಲವೇ ಕ್ಷಣಗಳಲ್ಲೇ ದೆಹಲಿ ಪೊಲೀಸರು ವಿಜಯ್ ಗೋಯಲ್ ಅವರಿಗೆ ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ಅವರು ಸಂಸದ ಗೋಯಲ್ ಅವರನ್ನು ಭೇಟಿ ಮಾಡಿ, ಸಮ-ಬೆಸ ಯೋಜನೆಯ ಕುರಿತು ಮಾಹಿತಿ ನೀಡಿದರು. ಅಲ್ಲದೆ ಯೋಜನೆಯ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದ್ದರು.
ಈ ವೇಳೆ ಮಾತನಾಡಿದ ವಿಜಯ್ ಗೋಯಲ್ ನಾನು ಸಮ-ಬೆಸ ಯೋಜನೆಯನ್ನು ವಿರೋಧಿಸುತ್ತಿಲ್ಲ, ಆದರೆ ಈ ಯೋಜನೆಯನ್ನು ಆಪ್ ಪಕ್ಷ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನಾನು ವಿರೋಧಿಸುತ್ತಿದ್ದೇನೆ. ಜತೆಗೆ ನಿಯಮ ಉಲ್ಲಂಘಿಸಿದವರಿಗೆ 2000 ರೂ. ದಂಡ ವಿಧಿಸಲಾಗುತ್ತಿದ್ದು, ದಂಡದ ಪ್ರಮಾಣವನ್ನು ಇಳಿಕೆ ಮಾಡಬೇಕು. ಈ ನಿಯಮ ಜನತೆಯನ್ನು 2 ಕಾರು ಹೊಂದುವಂತೆ ಪ್ರೇರೇಪಿಸುತ್ತಿದೆ ಎಂದು ತಿಳಿಸಿದರು.
ವಿಜಯ್ ಗೋಯಲ್ ಅವರು ಮೊದಲೇ ಸಮ-ಬೆಸ ನಿಯಮವನ್ನು ಉಲ್ಲಂಘಿಸುವುದಾಗಿ ತಿಳಿಸಿದ್ದರು. ಆ ಮೂಲಕ ಆಪ್ ಸರ್ಕಾರದ ಯೋಜನೆಗೆ ವಿರೋಧ ವ್ಯಕ್ತ ಪಡಿಸಿದ್ದರು.