ಭಾರತೀಯ ಕ್ರಿಕೆಟರ್ ಶಿಖರ್ ಧವನ್ ಜೊತೆಗೆ ಸ್ವಪ್ನ 
ದೇಶ

ಕನಸುಗಳ ಬೆನ್ನುಹತ್ತಿ ಸಾಗುವ ಸ್ವಪ್ನ

ಆಕೆಯ ಪಾರ್ಶ್ವಪೀಡಿತ ತಾಯಿ ಸತ್ತಾಗ ಅವಳಿಗೆ ಕೇವಲ 3 ವರ್ಷ ವಯಸ್ಸು. ಎರಡು ವರ್ಷ ಕಳೆದ ನಂತರ ಆಕೆಯ ತಂದೆ...

ರಾಜಮ್(ಶ್ರೀಕಾಕುಲಂ): ಈಕೆಯ ಪಾರ್ಶ್ವಪೀಡಿತ ತಾಯಿ ಸತ್ತಾಗ ಅವಳಿಗೆ ಕೇವಲ 3 ವರ್ಷ. ಎರಡು ವರ್ಷ ಕಳೆದ ನಂತರ ಆಕೆಯ ತಂದೆ ಕೂಡ ನಿಧನರಾದರು. ಅಷ್ಟು ಸಾಲದೆಂಬಂತೆ ಅಪಘಾತವೊಂದರಲ್ಲಿ ಆಕೆ ತನ್ನೆರಡೂ ಕೈಗಳನ್ನು ಕಳೆದುಕೊಂಡಳು. ಈ ಎಲ್ಲಾ ಸಂಕಷ್ಟಗಳ ಸರಮಾಲೆಗಳ ನಡುವೆಯೂ ಆಕೆ ಜೀವನದಲ್ಲಿ ಗೆದ್ದು ಬಂದಿದ್ದಾಳೆ.

ಈಕೆ 17 ವರ್ಷದ ಕೊವ್ವಾಲಿ ಸ್ವಪ್ನ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾವಿರಕ್ಕೆ 726 ಅಂಕಗಳನ್ನು ಗಳಿಸಿ ಇದೀಗ ಎಂಜಿನಿಯರ್ ಆಗುವ ಕನಸು ಕಾಣುತ್ತಿದ್ದಾಳೆ. ಈಕೆಯ ಹುಟ್ಟೂರು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ರೆಗಿಡಿ ಅಮದಲವಲಾಸ ಮಂಡಲ್. ಅಲ್ಲಿ  ಸ್ವಪ್ನಾಳನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಚಿಕ್ಕವಳಿರುವಾಗ ಗ್ರಾಮದ ದಿನಗೂಲಿ ನೌಕರರ ಜೊತೆ ಜೀವನೋಪಾಯಕ್ಕಾಗಿ ಹೈದರಾಬಾದ್ ಗೆ ವಲಸೆ ಹೋದಳು. ಅವರ ಜೊತೆ ಕಟ್ಟಡ ಕಾಮಗಾರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು.ಆದರೆ ಅಲ್ಲಿ ಕೂಡ ಆಕೆಯ ಕಷ್ಟದ ದಿನಗಳು ನಿಲ್ಲಲಿಲ್ಲ. ಕೆಲಸ ಮಾಡುತ್ತಿದ್ದ ಜಾಗದಲ್ಲಿ ವಿದ್ಯುತ್ ತಂತಿಯೊಂದು ಆಕೆಯ ಮೇಲೆ ಬಿದ್ದು ತನ್ನೆರಡೂ ಕೈಗಳನ್ನು ಕಳೆದುಕೊಂಡಳು. ಏನೂ ಕೆಲಸ ಮಾಡಲು ಸಾಧ್ಯವಾಗದೆ ತನ್ನ ಗ್ರಾಮಕ್ಕೆ ಹಿಂತಿರುಗಿದಳು.

ಆಗ ಸ್ವಪ್ನ ಜೀವನಕ್ಕೆ ಆಸರೆಯಾಗಿದ್ದು ವಾವಿಲವಾಲಸದ ಪಿ.ಸಿದ್ಧಾರ್ಥ್ ಎನ್ನುವವರು. ಸಿದ್ದಾರ್ಥ್ ಸ್ವಪ್ನಳನ್ನು ಶಾಲೆಗೆ ಸೇರಿಸಿದರು. ಕೈಯಿಲ್ಲದ ಸ್ವಪ್ನ ಬಾಯಿಯಲ್ಲಿ ಬರೆಯಲು ಆರಂಭಿಸಿದಳು. ಕೆಲವೇ ಸಮಯದಲ್ಲಿ ಬಾಯಲ್ಲಿ ಬರೆಯುವುದು ರೂಢಿಯಾಯಿತು. ಇದೀಗ ಆಕೆ ಬಾಯಲ್ಲಿ ಬಣ್ಣದ ಪೆನ್ಸಿಲ್ ಹಿಡಿದುಕೊಂಡು ಚಿತ್ರ ಕೂಡ ಬಿಡಿಸುತ್ತಾಳೆ. ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ 27 ವರ್ಷದ ಸಿದ್ಧಾರ್ಥ್ ಕೃಷಿಯನ್ನು ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸ್ವಪ್ನಗೆ ಒಬ್ಬ ಸಹಾಯಕರನ್ನು ನೀಡಲಾಗಿತ್ತು. ಆದರೆ ಸ್ವಪ್ನ ಅದಕ್ಕೆ ಒಪ್ಪಲಿಲ್ಲ. 7ನೇ ತರಗತಿಯಿಂದ ಬಾಯಿಯಲ್ಲಿಯೇ ಪೆನ್ನು ಸಿಕ್ಕಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದು, ತಾನೇ ಬರೆಯುತ್ತೇನೆಂದು ಹಠಹಿಡಿದಳು. ಆಕೆಗೆ ಒಂದು ಗಂಟೆ ಹೆಚ್ಚಿನ ಕಾಲಾವಧಿ ನೀಡಲಾಯಿತು.

''ನನ್ನ ಪೋಷಕರಿಬ್ಬರನ್ನೂ ಕಳೆದುಕೊಂಡಾಗ ನಾನು ನಿಜವಾಗಲೂ ಧೃತಿಗೆಟ್ಟೆ. ಆಗ ನನ್ನ ನೆರವಿಗೆ ಬಂದದ್ದೇ ಸಿದ್ಧಾರ್ಥ್ ಸರ್, ಅವರಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಕನಸನ್ನು ಸಾಕಾರಗೊಳಿಸುವ ವಿಶ್ವಾಸವಿದೆ'' ಎನ್ನುತ್ತಾಳೆ

ಕಲಿಯುದರಲ್ಲಿ ಮಾತ್ರವಲ್ಲದೆ ಸ್ವಪ್ನ ಕ್ಯಾನ್ವಾಸ್ ನಲ್ಲಿ ಕುಂಚರೇಖೆಗಳನ್ನು ಬಿಡಿಸುವುದರಲ್ಲಿಯೂ ಜಾಣೆ. ಉತ್ತಮ ಕಲಾವಿದೆ ಎಂದು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಳು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹಲವು ಐಎಎಸ್, ಐಪಿಎಸ್ ಅಧಿಕಾರಿಗಳು, ಕ್ರಿಕೆಟರ್ ಶಿಖರ್ ಧವನ್ ಆಕೆಯ ಸಹಾಯ ಮಾಡಲು ಮುಂದೆ ಬಂದಿದ್ದಾರೆ. '' ನಾನು ಆಕೆಯ ಶಿಕ್ಷಣದ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತೇನೆ. ಆದರೆ ಎಂಜಿನಿಯರಿಂಗ್ ಓದಿಸಬೇಕೆಂದರೆ ತುಂಬಾ ಹಣ ಬೇಕು. ಅದಕ್ಕೆ ಸರ್ಕಾರ ಸಹಾಯ ಮಾಡಬೇಕು ಎನ್ನುತ್ತಾರೆ ಸಿದ್ಧಾರ್ಥ್.

ಸ್ವಪ್ನ 7ನೇ ತರಗತಿಯಲ್ಲಿ 600ಕ್ಕೆ 521, ಹತ್ತನೇ ತರಗತಿಯಲ್ಲಿ ಬಿ ಗ್ರೇಡ್ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾವಿರಕ್ಕೆ 726 ಅಂಕಗಳನ್ನು ಗಳಿಸಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟದ ಅಪರಾಧಿಗಳು ಎಲ್ಲೇ ಅಡಗಿದ್ದರೂ ಹಿಡಿದು ಅವರಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ: ಅಮಿತ್ ಶಾ

ಪ್ರಧಾನಿ ಮೋದಿ ಭೇಟಿಯಾದ ಸಿಎಂ; ರಾಯಚೂರಿಗೆ ಏಮ್ಸ್, ಪ್ರವಾಹ ಪರಿಹಾರಕ್ಕೆ ಮನವಿ

ದೆಹಲಿ ಸ್ಫೋಟಕ್ಕೂ ಮುನ್ನ ಹಮಾಸ್ ಮಾದರಿಯ ಭೀಕರ ದಾಳಿಗೆ ಯೋಜನೆ ರೂಪಿಸಿದ್ದ ಉಗ್ರರು!

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು, ICU ನಲ್ಲಿ ಚಿಕಿತ್ಸೆ!

ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸುತ್ತಿರುವ ಮದರಸಾ ಶಿಕ್ಷಕ: ಸಿಸಿಟಿವಿ ವಿಡಿಯೋ ವೈರಲ್!

SCROLL FOR NEXT