ದೇಶ

'ಖಾಲಿ ವಾಗ್ದಾನ'ಗಳ ಬಗ್ಗೆ ಪ್ರಧಾನಿ ಮೇಲೆ ಕನ್ಹಯ್ಯ ವಾಗ್ದಾಳಿ

Guruprasad Narayana

ಮುಂಬೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್, 'ಖಾಲಿ ವಾಗ್ದಾನ'ಗಳನ್ನು ನೀಡುವುದರ ಬದಲು ಕೆಲಸ ಮಾಡುವಂತೆ ಆಗ್ರಹಿಸಿದ್ದಾರೆ. ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕೂಡ ಅವರು ಶನಿವಾರ ಹೇಳಿದ್ದಾರೆ.

ತಿಲಕನಗರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು 'ಸ್ಟ್ಯಾಂಡ್ ಅಪ್ ಇಂಡಿಯಾ' (ಎದ್ದೇಳು ಭಾರತ), ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಹೆಸರಿನಲ್ಲಿ ಖಾಲಿ ಭರವಸೆಗಳನ್ನು ನೀಡುವುದನ್ನು ನಿಲ್ಲಿಸಿ, ಧರ್ಮ-ಜಾತಿ ರಾಜಕೀಯ ಮಾಡುವುದರ ಬದಲು ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಿ ಎಂದಿದ್ದಾರೆ.

"ಜನ ಸಾಮಾನ್ಯರ ಮತ್ತು ದೇಶದ ಒಳಿತಿಗೆ ನಮ್ಮದು ಸಾಮಾಜಿಕ ನ್ಯಾಯದ ರಾಜಕೀಯ. ಈ ದೇಶದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಒಗ್ಗೂಡುತ್ತಿದ್ದಾರೆ. ಆದುದರಿಂದಲೇ ಮೋದಿ ಸರ್ಕಾರ ಹೆದರಿದೆ" ಎಂದು ಹರ್ಷೋದ್ಘಾರ ಮತ್ತು ಕರಾಡತನದ ಮಧ್ಯೆ ಕನ್ಹಯ್ಯ ಹೇಳಿದ್ದಾರೆ.

ಆರ್ ಎಸ್ ಎಸ್ ಪ್ರೇರೇಪಿತ ಜಾತಿ ಮತ್ತು ಕೋಮು ರಾಜಕಾರಣವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಕರೆ ನೀಡಿದ್ದು, ಪ್ರಜಾಪ್ರಭುತ್ವ ಉಳಿಸಲು ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುವಂತೆ ಕರೆ ನೀಡಿದ್ದಾರೆ.

"ಇನ್ನೂ ಎಷ್ಟು ದಿನ ಸಾಮಾನ್ಯ ಜನ ಕಷ್ಟ ಪಡಬೇಕು?.. ಸೂರ್ಯ ಏಳುತ್ತಾನೆ" ಎಂದು ಕೂಡ ಅವರು ಹೇಳಿದ್ದಾರೆ.

ಎಡ ವಿದ್ಯಾರ್ಥಿ ಮತ್ತು ಯುವ ಸಂಘಟನೆ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಭಾಗಿಯಾಗಲು ಚೊಚ್ಚಲ ಬಾರಿಗೆ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮುಂಬೈಗೆ ಬಂದಿದ್ದರು. ಅವರು ಪುಣೆಯಲ್ಲಿ ಕೂಡ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ.

SCROLL FOR NEXT