ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ-ಬೆಸ ನೀತಿಯಿಂದ ತಮಗೆ ಸಂಪೂರ್ಣ ವಿನಾಯ್ತಿ ನೀಡುವಂತೆ ಸೋಮವಾರ ರಾಜ್ಯಸಭಾ ಸದಸ್ಯರು ಆಗ್ರಹಿಸಿದ್ದಾರೆ.
ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರವಾಲ್ ಅವರು, ಸಮ-ಬೆಸ ನೀತಿಯ ಪರಿಣಾಮವಾಗಿ ಸಂಸತ್ ತಲುಪುವುದು ಬಹಳ ಕಷ್ಟವಾಯಿತು ಎಂದರು. ಅಲ್ಲದೆ ಒಬ್ಬ ಸಂಸದನಾಗಿ ಸಂಸತ್ ಕಲಾಪದಲ್ಲಿ ಭಾಗವಹಿಸುವುದು ನಮ್ಮ ವಿಶೇಷ ಹಕ್ಕು ಎಂದಿದ್ದಾರೆ.
ಇನ್ನು ಸಂಸತ್ ಸದಸ್ಯರನ್ನು ಸಂಸತ್ತಿಗೆ ಬರದಂತೆ ನಿಯಂತ್ರಿಸುವುದು ಹೇಗೆ ಸಾಧ್ಯ?’ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಅವರು, ಸಂಸತ್ ಅಧಿವೇಶನ ಇಂದು ಪೂನಾರಂಭವಾಗಿದ್ದು, ಸಮ-ಬೆಸ ನೀತಿಯಿಂದಾಗಿ ಹಲವು ಸಂಸದರು ಕಲಾಪಕ್ಕೆ ಗೈರು ಆಗಿದ್ದಾರೆ. 10 ಸದಸ್ಯರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ದೆಹಲಿಯ ಹೊರಗಡೆಯಿಂದ ಬರುತ್ತಾರೆ. ಅವರು ಭದ್ರತೆಯಿಲ್ಲದೆ ಹಾಗೂ ಖಾಸಗಿ ವಾಹನದಲ್ಲಿ ಸಂಸತ್ ಪ್ರವೇಶಿಸಲು ಸಾಧ್ಯವಿಲ್ಲ ಎಂದರು.
ಸಂಸತ್ತಿನ ಮುಂಗಡಪತ್ರ ಅಧಿವೇಶನದ ಉತ್ತರಾರ್ಧ ಈದಿನ ಆರಂಭಗೊಂಡಿದ್ದು, ಇದೇ ಮೊದಲ ಬಾರಿಗೆ ಸಂಸತ್ ಸದಸ್ಯರಿಗೆ ಸಮ-ಬೆಸ ನೀತಿಯ ಬಿಸಿ ತಟ್ಟಿತು. ಏಪ್ರಿಲ್ 30ರವರೆಗೆ ಜಾರಿಯಲ್ಲಿ ಇರಲಿರುವ ಸಮ-ಬೆಸ ನೀತಿಯು ಪರ್ಯಾಯ ದಿನಗಳಂದು ಸಮ-ಬೆಸ ದಿನಾಂಕಗಳಿಗೆ ಅನುಗುಣವಾಗಿ ಸಮ-ಬೆಸ ಸಂಖ್ಯೆಯ ನೋಂದಣಿ ಸಂಖ್ಯೆಯ ಖಾಸಗಿ ವಾಹನಗಳಿಗೆ ಸಂಚರಿಸಲು ಅವಕಾಶ ಒದಗಿಸಿದೆೆ. ಟ್ಯಾಕ್ಸಿಗಳು ಸಂಸತ್ತಿನ ಒಳಕ್ಕೆ ಬರಲು ಸಾಧ್ಯವಿಲ್ಲವಾದ ಕಾರಣ ಸಂಸತ್ ಸದಸ್ಯರನ್ನು ಸಮ-ಬೆಸ ನಿಯಮದ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಆಗ್ರಹಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos