ಮುಂಬೈ: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದ್ದು ಉಗ್ರ ಅಬು ಜುಂದಾಲ್ ಸೇರಿದಂತೆ ಇತರ 7 ಮಂದಿಗೆ ಮೋಕಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2002ರ ಗುಜರಾತ್ ಗಲಭೆಯ ಬಳಿಕ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವಿಶ್ವಹಿಂದೂ ಪರಿಷತ್ ಪ್ರವೀಣ್ ತೊಗಾಡಿಯಾರ ಹತ್ಯೆಗೆ ಸಂಚು ರೂಪಿಸಿದ್ದರು. ಅಲ್ಲದೆ ಇದಕ್ಕಾಗಿ ಅಕ್ರಮ ಶಸ್ತ್ರಾಸ್ತ್ರವನ್ನು ಸಂಗ್ರಹಿಸಿದ್ದ ಅಬು ಜುಂದಾಲ್ ಸೇರಿ 12 ಮಂದಿ ದೋಷಿ ಎಂದು ಕಳೆದ ಗುರುವಾರ ಮೋಕಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ನ್ಯಾಯಾಲಯ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಇಬ್ಬರಿಗೆ 14 ವರ್ಷ ಜೈಲು ಶಿಕ್ಷೆ ಹಾಗೂ ಮೂವರಿಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಔರಂಗಬಾದ್ ನಲ್ಲಿ 2006ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಸಂಬಂಧ 26/11ರ ಮುಂಬೈ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಅಬು ಜುಂದಾಲ್ ಸೇರಿ 12 ಮಂದಿ ದೋಷಿ ಎಂದು ಕೋರ್ಟ್ ಹೇಳಿದೆ. ಇನ್ನು ಪ್ರಕರಣ ಸಂಬಂಧ 10 ಮಂದಿಯನ್ನು ಕೋರ್ಟ್ ಖುಲಾಸೆಗೊಳಿಸಿತ್ತು.
2006ರ ಮೇ 8ರಂದು ಮಹಾರಾಷ್ಟ್ರ ಎಟಿಎಸ್ ಔರಂಗಬಾದ್ ನ ಚಂದ್ ವಾಡ್-ಮನ್ಮಾದ್ ಹೆದ್ದಾರಿಯಲ್ಲಿ ಕಾರನ್ನು ಬೆನ್ನಟ್ಟಿ ಮೂವರು ಶಂಕಿತ ಉಗ್ರರನ್ನು ಬಂಧಿಸಿ ಅವರಿಂದ 30 ಕೆಜಿ ಆರ್ಡಿಎಕ್ಸ್, 10 ಎಕೆ-47, 3,200 ಬುಲೆಟ್ ವಶಪಡಿಸಿಕೊಂಡಿತ್ತು. ಈ ವೇಳೆ ಜುಂದಾಲ್ ತಪ್ಪಿಸಿಕೊಂಡು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿ, ನಂತರ ಪಾಕಿಸ್ತಾನಕ್ಕೆ ತೆರಳಿದ್ದ.
ಮಹಾರಾಷ್ಟ್ರದ ಬೀದ್ ಜಿಲ್ಲೆಯ ನಿವಾಸಿಯಾಗಿರುವ ಜುಂದಾಲ್ ಲಷ್ಕರೆ ಉಗ್ರನಾಗಿದ್ದು, 2012ರಲ್ಲಿ ಜುಂದಾಲ್ ನನ್ನು ಸೌದಿ ಅರೇಬಿಯಾ ಭಾರತಕ್ಕೆ ಗಡಿಪಾರು ಮಾಡಿತ್ತು. 2013ರಲ್ಲಿ ಆಗಸ್ಟ್ ನಲ್ಲಿ ವಿಶೇಷ ಕೋರ್ಟ್ 22 ಮಂದಿ ಬಂಧಿತರ ವಿರುದ್ಧ ಆರೋಪ ದಾಖಲಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos