ವಡೋದರಾ; ಬಾಪು ಹತ್ಯೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೈವಾಡವಿದೆ ಎಂದು ನೀಡಿದ್ದ ಹೇಳಿಕೆಗೆ ತಾವು ಈಗಲೂ ಬದ್ಧ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ ನ ಭವಿಷ್ಯಕ್ಕಾಗಿ ರಾಜಕೀಯ ತೊರೆಯುವುದು ಒಳ್ಳೆಯದು ಎಂದು ಎಐಸಿಸಿ ಉಪಾಧ್ಯಕ್ಷರಿಗೆ ಸಲಹೆ ನೀಡಿದ್ದಾರೆ.
ಆರ್ ಎಸ್ ಎಸ್ ನವರು ಗಾಂಧೀಜಿ ಹತ್ಯೆ ಮಾಡಿದ್ದರು ಎಂದು ಕಳೆದ ವರ್ಷ ಮಾರ್ಚ್ 6 ರಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಸಂಬಂಧ ಆರ್ ಎಸ್ ಎಸ್ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕ್ಷಮೆ ಕೇಳುವುದು ಇಲ್ಲವೇ ಕಾನೂನು ಕ್ರಮ ಎದುರಿಸಬೇಕೆಂದು ರಾಹುಲ್ ಗಾಂಧಿಗೆ ತಪರಾಕಿ ಹಾಕಿತ್ತು.
ಹೀಗಾಗಿ ತಮ್ಮ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದ ರಾಹುಲ್ ನಾನು ಹೇಳಿದ್ದು, ಆರ್ ಎಸ್ ಎಸ್ ನ ಕೆಲ ನಾಯಕರು ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದಾಗಿ ರಾಹುಲ್ ತಮ್ಮ ಹೇಳಿಕೆ ತಿರುಚಿದ್ದರು.