ದೇಶ

ಒಂದು ತುತ್ತು ಶೀಲಾಗೆ, ಇನ್ನೊಂದು ಸಾಮುಗೆ, ಜಯಲಲಿತಾ ಆಸ್ಪತ್ರೆಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ದಾದಿಯರು

Sumana Upadhyaya
ಚೆನ್ನೈ: ಜನರು ಆಕೆಯನ್ನು ಐರನ್ ಲೇಡಿ ಎಂದು ಕರೆಯುತ್ತಾರೆ. ಆದರೆ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಕಳೆದ 75 ದಿನಗಳಲ್ಲಿ ಅವರನ್ನು ಹತ್ತಿರದಿಂದ ಕಂಡವರು ಅವರನ್ನು ಮೃದು ಸ್ವಭಾವದ, ಕಾಳಜಿಯ ವ್ಯಕ್ತಿತ್ವ ಎನ್ನುತ್ತಾರೆ ಅವರ ಶುಶ್ರೂಷೆ ಮಾಡುತ್ತಿದ್ದ ದಾದಿಯರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಅಪೊಲೊ ಆಸ್ಪತ್ರೆಯಲ್ಲಿ 16 ಜನ ಶುಶ್ರೂಷಕಿಯರು ನೋಡಿಕೊಳ್ಳುತ್ತಿದ್ದರು.
''ಅಮ್ಮನವರು ಉಪ್ಮಾ, ಪೊಂಗಲ್, ಮೊಸರನ್ನ ಮತ್ತು ಆಲೂಗಡ್ಡೆ ಪದಾರ್ಥವನ್ನು ಇಷ್ಟಪಡುತ್ತಿದ್ದರು. ಪ್ರತಿ ತುತ್ತು ಆಹಾರ ತಿನ್ನುವಾಗಲೂ ನಾನು ಶೀಲಾಳಿಗಾಗಿ ಈ ತುತ್ತು ತಿನ್ನುತ್ತಿದ್ದೇನೆ, ಸಾಮುವಿಗಾಗಿ ತಿನ್ನುತ್ತೇನೆ, ಇನ್ನೊಂದು ಚಮಚ ತುತ್ತನ್ನು ಮತ್ತೊಬ್ಬ ನರ್ಸ್ ನ್ನು ತೋರಿಸಿ ಅವಳಿಗಾಗಿ ತಿನ್ನುತ್ತೇನೆ ಎನ್ನುತ್ತಿದ್ದರು. ಇಂತಹ ಮಾತುಗಳಿಂದಲೇ ಅವರು ಅವರನ್ನು ಮತ್ತು ನಮ್ಮನ್ನು ಉತ್ತೇಜಿಸುತ್ತಿದ್ದರು ಎನ್ನುತ್ತಾರೆ.
ಅಷ್ಟು ಜನ ನರ್ಸ್ ಗಳಲ್ಲಿ ಜಯಲಲಿತಾಗೆ ಇಷ್ಟವಾಗಿದ್ದ ದಾದಿಯರೆಂದರೆ ಸಿವಿ ಶೀಲಾ, ಎಂವಿ ರೇಣುಕಾ ಮತ್ತು ಸಮುಂದೀಶ್ವರಿ. 
ನಂತರ ಜಯಲಲಿತಾರನ್ನು ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಿದ ನಂತರ ಪ್ರತಿದಿನ ಒಂದು ಗಂಟೆ ಟಿವಿ ನೋಡುತ್ತಿದ್ದರು ಮತ್ತು ಹಳೆಯ ತಮಿಳು ಗೀತೆಗಳನ್ನು ನಮ್ಮೊಂದಿಗೆ ಕೇಳುತ್ತಿದ್ದರು. ಅವರ ಆರೋಗ್ಯ ಸುಧಾರಿಸಲು ಸಾವಿರಾರು ಮಂದಿ ಪ್ರಾರ್ಥನೆ ಮಾಡುತ್ತಿರುವುದು ನೋಡಿ ಅವರ ಮನ ಕರಗುತ್ತಿತ್ತು ಎನ್ನುತ್ತಾರೆ ರೇಣುಕಾ.
ಯಾರಾದರೂ ಅವರ ಕೋಣೆಗೆ ಪ್ರವೇಶಿಸಿದರೆ ಅವರೊಂದಿಗೆ ನಗುತ್ತಾ ನಿಮಗೆ ನಾನು ಏನು ಮಾಡಲು ಸಾಧ್ಯ ಎಂದು ಕೇಳುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಮುಖ್ಯ ಶುಶ್ರೂಷಕಿ ಸುನೀತಾ ಆರ್. ಜಯಲಲಿತಾ ಅವರು ದಾದಿಯರ ಮೇಲಿಟ್ಟಿದ್ದ ನಂಬಿಕೆಗೆ ಅವರು ಮಾರುಹೋಗಿದ್ದರು. ಫಿಜಿಯೋಥೆರಪಿ ತಜ್ಞರ ಸಲಹೆ ಮೇರೆಗೆ ನಮ್ಮ ಜೊತೆ ಚೆಂಡಾಟವಾಡುತ್ತಿದ್ದರು. ಅವರೆಂದಿಗೂ ನಮ್ಮ ಸಲಹೆಗಳನ್ನು ಒಪ್ಪದೆ ಇರುತ್ತಿರಲಿಲ್ಲ. ವ್ಯಾಯಾಮ ಮಾಡಲು ಸಾಧ್ಯವಾಗದಿರುವಾಗ ''ನನಗೀಗ ಸುಸ್ತಾಗುತ್ತಿದೆ, ಆಮೇಲೆ ಮಾಡೋಣವೇ ಎಂದು ಕೇಳುತ್ತಿದ್ದರು ಎನ್ನುತ್ತಾರೆ.
SCROLL FOR NEXT