ಅಲಿಘಡ: ಹಳೆಯ ನೋಟು ಬದಲಾವಣೆಗಾಗಿ ಸತತ 3 ದಿನಗಳ ಕಾಲ ಬ್ಯಾಂಕ್ ಮುಂದೆ ನಿಂತರೂ ಹಣ ಬದಲಾವಣೆ ಮಾಡಿಸಿಕೊಳ್ಳುವಲ್ಲಿ ವಿಫಲವಾದ ಮಹಿಳೆಯೊಬ್ಬಳು ತೀವ್ರವಾಗಿ ಮನನೊಂದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ.
ಅಲಿಘಡದ ನಿವಾಸಿ ರಜಿಯಾ ಎಂಬ 35 ವರ್ಷದಗ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಹಣ ಬದಲಾವಣೆಯಾಗಲ್ಲಿಲ್ಲ ಎಂಬ ಹತಾಶೆಯಿಂದ ಮಹಿಳೆ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತದಾರೂ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಏನಿದು ಘಟನೆ?
35 ವರ್ಷದ ರಜಿಯಾ ಉತ್ತರ ಪ್ರದೇಶದ ಅಲಿಘಡ ನಿವಾಸಿಯಾಗಿದ್ದು, ಕಳೆದ ನವೆಂಬರ್ 8ರಂದು ಕೇಂದ್ರ ಸರ್ಕಾರ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿತ್ತು. ಹೀಗಾಗಿ ರಜಿಯಾ ಕಳೆದ ನವೆಂಬರ್ 22ರಂದು ತನ್ನ ಬಳಿ ಇದ್ದ ಸುಮಾರು 3 ಸಾವಿರ ಮೌಲ್ಯದ 500 ಮುಖಬೆಲೆಯ 6 ನೋಟುಗಳನ್ನು ಬದಲಿಸಿಕೊಳ್ಳಲು ಸ್ಥಳೀಯ ಬ್ಯಾಂಕ್ ಗೆ ತೆರಳಿದ್ದಳು. ಅಲ್ಲಿ ಸರತಿ ಸಾಲಲ್ಲಿ ನಿಂತು ಇನ್ನೇನು ತಮ್ಮ ಸರದಿ ಬಂದು ತಾವು ನೋಟು ಬದಲಾವಣೆ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲೇ ಬ್ಯಾಂಕ್ ಸಿಬ್ಬಂದಿ ನೋಟುಗಳು ಖಾಲಿಯಾಗಿವೆ ನಾಳೆ ಬನ್ನಿ ಎನ್ನುತ್ತಿದ್ದರು. ಇದೇ ರೀತಿ ಸತತ ಮೂರು ದಿನ ನಿಂತರೂ ಮಹಿಳೆಗೆ ನೋಟು ಬದಲಾವಣೆ ಸಾಧ್ಯವಾಗಿರಲ್ಲಿಲ್ಲ. ಹೀಗಾಗಿ ತೀವ್ರ ನೊಂದ ಮಹಿಳೆ ಮನೆಗೆ ಬಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ್ದರು.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆ ದೆಹಲಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಜಿಯಾ ಪತಿ ದಿನಗೂಲಿ ನೌಕರನಾಗಿದ್ದು, ಆಕೆಯ ಬಳಿ ಇದ್ದ ಹಣ ಆತನ 15 ದಿನಗಳ ವೇತನದ ಹಣ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ರಜಿಯಾ ಪತಿ ಅಕ್ಬರ್ ಅವರು, ನನ್ನ 15 ದಿನಗಳ ಸಂಬಳವನ್ನು ಆಕೆಗೆ ನೀಡಿದ್ದೆ. ಆದರೆ ಈ ಹಣ ನಿಷೇಧವಾಗಿದ್ದರಿಂದ ಆ ಹಣವನ್ನು ಬದಲಸಲು ಮುಂದಾಗಿದ್ದೆವು. ಆದರೆ ಸತತ ಮೂರು ದಿನ ಬ್ಯಾಂಕ್ ಮುಂದೆ ನಿಂತರೂ ಹಣ ಬದಲಾವಣೆ ಸಾಧ್ಯವಾಗಲಿಲ್ಲ. ಇತ್ತ ಮನೆಯಲ್ಲಿ ಅಗತ್ಯ ವಸ್ತುಗಳಿಲ್ಲದೇ ಮಕ್ಕಳು ಊಟ ಕೇಳುತ್ತಿದ್ದರು. ಕೈಯಲ್ಲಿ ಹಣವಿದ್ದರೂ ಅದನ್ನು ಖರ್ಚು ಮಾಡಲಾಗಾದರ ಪರಿಸ್ಥಿತಿಯಿಂದ ಬೇಸತ್ತು ರಜಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
ರಜಿಯಾ ಕುಟುಂಬಕ್ಕೆ 5 ಲಕ್ಷ ಪರಿಹಾರ
ಇನ್ನು ಮೃತ ರಜಿಯಾ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಕೇವಲ ರಜಿಯಾ ಮಾತ್ರವಲ್ಲದೇ ನೋಟು ನಿಷೇಧ ಬಳಿ ಬ್ಯಾಂಕ್ ಗಳ ಮುಂದೆ ಸರತಿ ಸಾಲಲ್ಲಿ ನಿಂತು ಪ್ರಾಣ ಬಿಟ್ಟವರಿಗೂ ಮುಖ್ಯಮಂತ್ರಿಗಳ ಪರಿಹಾರ ಧನದಿಂದ ತಲಾ 2 ಲಕ್ಷ ನೀಡುವುದಾಗಿ ಸಿಎಂ ಅಖಿಲೇಶ್ ಯಾದವ್ ಘೋಷಣೆ ಮಾಡಿದ್ದಾರೆ.