ಕಥುವಾ(ಜಮ್ಮು ಮತ್ತು ಕಾಶ್ಮೀರ): ಧರ್ಮದ ಆಧಾರದ ಮೇಲೆ ಭಾರತವನ್ನು ವಿಭಜನೆ ಮಾಡಲು ಪಾಕಿಸ್ತಾನ ಸಂಚು ರೂಪಿಸಿದೆ. ಆದರೆ ಅದು ಯಶಸ್ವಿಯಾಗಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಕಥುವಾದಲ್ಲಿ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಧರ್ಮದ ಆಧಾರದ ಮೇಲೆ ಭಾರತ ಈಗಾಗಲೇ 1947ರಲ್ಲಿ ವಿಭಜನೆಯಾಗಿದೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗ ಎಲ್ಲಾ ಭಾರತೀಯರು ಸಹೋದರರಂತೆ, ಹಿಂದೂ, ಮುಂಸ್ಲಿ ಎನ್ನದೇ ಒಂದೆ ತಾಯಿ ಮಕ್ಕಳಂತೆ ಜೀವಿಸುತ್ತಿದ್ದಾರೆ ಎಂದರು.
ಇದೇ ವೇಳೆ ತನ್ನ ನೆಲದಿಂದ ನಡೆಯುವ ಭಯೋತ್ಪಾದನೆ ನಿಯಂತ್ರಿಸಲು ಪಾಕಿಸ್ತಾನಕ್ಕೆ ಭಾರತ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದ ಗೃಹ ಸಚಿವರು, ನಾವೂ ಪಾಕ್ ನೊಂದಿಗೆ ಶಾಂತಿಯಿಂದಿರಲು ಬಯಸುತ್ತೇವೆ. ಆದರೆ ಅವರು ಪರೋಕ್ಷವಾಗಿ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತದ ಪ್ರತಿಯೊಬ್ಬ ಪ್ರಧಾನಿಮಂತ್ರಿಯೂ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತಾರೆ. ಆದರೆ ಆ ದೇಶಕ್ಕೆ ಶಾಂತಿಯ ಭಾಷೆ ಅರ್ಥವಾಗುತ್ತಿಲ್ಲ. ಹೀಗಾಗಿ ಭಾರತದ ಮೇಲೆ ನಾಲ್ಕು ಬಾರಿ ದಾಳಿ ಮಾಡಿದೆ. ಇದಕ್ಕೆ ನಮ್ಮ ಯೋಧರು ಸಹ ತಕ್ಕ ಪ್ರತ್ಯೂತ್ತರ ನೀಡಿದ್ದಾರೆ ಎಂದರು.