ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ
ನವದೆಹಲಿ: ನೋಟುಗಳ ನಿಷೇಧ ಈ ವರ್ಷದ ಅತಿ ದೊಡ್ಡ ಹಗರಣ ಎಂದು ಚಿದಂಬರಂ ಟೀಕಿಸಿದ್ದು. ನೈಸರ್ಗಿಕ ವಿಕೋಪ ಕೂಡ ದೇಶದ ಜನರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹಾನಿಯನ್ನುಂಟುಮಾಡುವುದಿಲ್ಲ. ಈ ಬಗ್ಗೆ ತನಿಖೆಯಾಗಬೇಕು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.
ಸರ್ಕಾರದ ನೋಟುಗಳ ಅಪಮೌಲ್ಯ ಕ್ರಮವನ್ನು ಖಂಡಿಸಿದ ಅವರು, ಸಂಸತ್ತಿನಲ್ಲಿ ಕಲಾಪದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉಪಸ್ಥಿತರಿರಬೇಕು ಎಂಬ ಪ್ರತಿಪಕ್ಷಗಳ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ಈಗ ನಡೆಯುತ್ತಿದೆ.
ಇದು ಕಾರಣವಿಲ್ಲದ ಬೇಡಿಕೆಯಾಗಲು ಹೇಗೆ ಸಾಧ್ಯ? ನೋಟುಗಳ ಅಪಮೌಲ್ಯದ ಕುರಿತು ಪ್ರತಿಪಕ್ಷಗಳು ಪ್ರತಿಭಟನೆ ಮಾಡುತ್ತಿರುವಾಗ ಪ್ರಧಾನಿಯವರು ಯಾಕೆ ಉಪಸ್ಥಿತರಿರುವುದಿಲ್ಲ? ಅವರು ನಮ್ಮ ಮಾತುಗಳನ್ನು ಕೇಳಬೇಕು ಎಂದು ಚಿದಂಬರಂ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಕಲಾಪ ಕಾಣುತ್ತಾ ಬಂದಿದೆ. ನೋಟುಗಳ ಅಪಮೌಲ್ಯ ಯೋಜನೆಯನ್ನು ಸರಿಯಾದ ಕ್ರಮದಲ್ಲಿ ಸರ್ಕಾರ ಜಾರಿಗೆ ತಂದಿಲ್ಲ ಎನ್ನುತ್ತಿವೆ. ದೇಶದ ಬಡಜನರಿಗೆ, ರೈತರಿಗೆ ತೊಂದರೆಯಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಕೂಗು. ಇದರಿಂದ ಸಂಸತ್ತಿನ ಎರಡೂ ಸದನಗಳಲ್ಲಿ ಯಾವುದೇ ಮಹತ್ವದ ಚರ್ಚೆ, ನಿರ್ಣಯಗಳು ಆಗಿಲ್ಲ. ಇಷ್ಟು ದಿನದ ಕಲಾಪಗಳು ಬರೀ ನೋಟುಗಳ ನಿಷೇಧ ವಿಷಯವೇ ನುಂಗಿಹಾಕಿದೆ. ಈ ತಿಂಗಳ 23ರಂದು ಚಳಿಗಾಲ ಅಧಿವೇಶನ ಮುಕ್ತಾಯಗೊಳ್ಳಲಿದೆ.
ಪ್ರಚಾರ ಪಡೆಯುವ ಉದ್ದೇಶದಿಂದ ವಿರೋಧ ಪಕ್ಷಗಳು ಶೂನ್ಯ ವೇಳೆಯಲ್ಲಿ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತವೆ. ಸರ್ಕಾರ ಚರ್ಚೆಗೆ ಸಿದ್ದವಿದೆ ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ.
ದೇಶಾದ್ಯಂತ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 2,000 ನೋಟುಗಳ ಸಾವಿರಾರು ಕೋಟಿ ರೂಪಾಯಿ ಸಿಕ್ಕಿದೆ. ಅವರಿಗೆ ಹೇಗೆ ಹೊಸ ನೋಟು ಸಿಗುತ್ತಿದೆ. ಇದು ಈ ವರ್ಷದ ಅತಿ ದೊಡ್ಡ ಹಗರಣ. ಈ ಬಗ್ಗೆ ತನಿಖೆಯಾಗಬೇಕು. ಕರೆನ್ಸಿಗಳ ನಿಷೇಧ ಸ್ಮಾರಕ ವಿಪತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವ್ಯಾಖ್ಯಾನಿಸಿರುವುದು ಸರಿಯಾಗಿದೆ ಎಂದು ಚಿದಂಬರಂ ಹೇಳಿದರು.
ಚಿದಂಬರಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ವೆಂಕಯ್ಯ ನಾಯ್ಡು, ಅವರು ಹೊರಗಡೆ ಮಾತನಾಡುವುದನ್ನು ಬಿಟ್ಟು ಸಂಸತ್ತಿನಲ್ಲಿ ಸಲಹೆ ನೀಡಲಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos