ನವದೆಹಲಿ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಈಗಿರುವ ಮದ್ಯದಂಗಡಿಗಳ ಅನುಮತಿ ಅವಧಿ ಮುಗಿಯುವವರೆಗೆ ಅವುಗಳನ್ನು ನಡೆಸಿಕೊಂಡು ಹೋಗಬಹುದು. ಆ ನಂತರ ಅನುಮತಿ ನವೀಕರಿಸುವಂತಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ.
ಹೆದ್ದಾರಿಗಳಲ್ಲಿನ ಮದ್ಯದ ಅಂಗಡಿಗಳನ್ನು ಮುಚ್ಚಲು ಮುಂದಿನ ವರ್ಷ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕೇವಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರವಲ್ಲದೆ ಅದರ 500 ಮೀಟರ್ ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡ ಮದ್ಯದ ಅಂಗಡಿಗಳಿದ್ದರೆ ಅವುಗಳನ್ನು ಮುಚ್ಚಬೇಕು ಎಂದು ಹೇಳಿದೆ.
ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮುಖ್ಯಸ್ಥರು ಸ್ಥಳೀಯ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆಯ ಜಾರಿಗೆ ಮುಂದಾಗಬೇಕೆಂದು ನ್ಯಾಯಾಲಯ ಹೇಳಿದೆ.
ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳಿರುವುದರಿಂದ ವಾಹನ ಚಾಲಕರು ಮದ್ಯ ಸೇವಿಸಿ ಅಪಘಾತವುಂಟಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕೋರ್ಟ್ ಈ ಆದೇಶ ನೀಡಿದೆ.