ದೇಶ

ಜಯಾ ಹತ್ಯೆಗೆ ಸಂಚು ಮಾಡಿದ್ದವರ ಕೈಗೇ ಪಕ್ಷದ ಉಸ್ತುವಾರಿ ಸರಿಯಲ್ಲ: ಶಶಿಕಲಾ ಪುಷ್ಪ

Manjula VN

ಚೆನ್ನೈ: ಶಶಿಕಲಾ ನಟರಾಜನ್ ಅವರು ಜೆ.ಜಯಾಲಲಿತಾ ಅವರನ್ನು ಹತ್ಯೆ ಮಾಡಲು ಯತ್ನ ನಡೆಸಿದ್ದು, ಅವರ ವಿರುದ್ಧ ಸಾಕಷ್ಟು ಪಿತೂರಿ ನಡೆಸಿದ್ದರು. ಇಂತಹವರನ್ನೇ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಉಚ್ಛಾಟಿತ ಎಡಿಎಂಕೆ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ ಅವರು ಹೇಳಿದ್ದಾರೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನದ ನಂತರ ತೆರವಾಗಿದ್ದ ಅಣ್ಣಾ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಿರೀಕ್ಷೆಯಂತೆಯೇ ನಿನ್ನೆ ಜಯಾಲಲಿತಾ ಅವರ ಪರಮಾಪ್ತ ಗೆಳತಿ ಶಶಿಕಲಾ ನಟರಾಜನ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಡಿಎಂಕೆ ರಾಜ್ಯಸಭಾ ಸಂಸದೆ ಶಶಿಕಲಾ ಪುಷ್ಪ ಅವರು, ಶಶಿಕಲಾ ನಟರಾಜನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ಸರಿಯಲ್ಲ. ಜಯಾಲಲಿತಾ ಅವರು ಎಲ್ಲಿಯೂ ಶಶಿಕಲಾ ಅವರ ಹೆಸರನ್ನು ಹೇಳಿರಲಿಲ್ಲ. ಅಮ್ಮ ಶಶಿಕಲಾ ಅವರಿಗೆ ಕನಿಷ್ಠ ಪಕ್ಷ ಶಾಸಕ ಸ್ಥಾನವನ್ನೂ ನೀಡಿರಲಿಲ್ಲ. ತಮ್ಮನ್ನು ಹತ್ಯೆ ಮಾಡಲು ಸಂಚೂ ರೂಪಿಸಿದ್ದ ಕಾರಣಕ್ಕೆ ಹಾಗೂ ತಮ್ಮ ವಿರುದ್ಧ ಪಿತೂರಿ ನಡೆದಿದ್ದರೆಂದು ಸ್ವತಃ ಜಯಾಲಲಿತಾ ಅವರೇ ಶಶಿಕಲಾ ಅವರನ್ನು ಪಕ್ಷದಿಂದ ಹೊರಗೆ ಹಾಕಿದ್ದರು ಎಂದು ಹೇಳಿದ್ದಾರೆ.

ಎಐಎಡಿಎಂಕೆ ಪಕ್ಷದ ಕಾನೂನಿ ಪ್ರಕಾರ ನೋಡಿದರೂ ಶಶಿಕಲಾ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದು ಸರಿಯಲ್ಲ. ಶಶಿಕಲಾ ನೇಮಕ ಕುರಿತಂತೆ ಈಗಾಗಲೇ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಜಯಲಲಿತಾ ಅವರ ಸಾವಿನ ಕುರಿತಂತೆ ಮಾತನಾಡಿರುವ ಅವರು, ಜಯಾಲಲಿತಾ ಅವರ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿತ್ತಿದ್ದು, ಕೂಡಲೇ ಸರ್ಕಾರ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಿದೆ. ಜಯಾಲಲಿತಾ ಆಸ್ಪತ್ರೆಗೆ ದಾಖಲಾದ ನಂತರ ಯಾವುದೂ ಪಾರದರ್ಶಕವಾಗಿ ಇರಲಿಲ್ಲ. ಜಯಾಲಲಿತಾ ಅವರಿಗೆ ಏನಾಗಿತ್ತು ಎಂದು ಪ್ರತೀಯೊಬ್ಬರು ಪ್ರಶ್ನಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲೂ ಕೂಡ ಈ ಪ್ರಶ್ನೆ ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

SCROLL FOR NEXT