ದೇಶ

ಸಿಂಧು ನದಿ ನೀರು ಹಂಚಿಕೆಯಲ್ಲಿ ಒಪ್ಪಂದದಲ್ಲಿ ಬದಲಾವಣೆ ಒಪ್ಪುವುದಿಲ್ಲ: ಪಾಕಿಸ್ತಾನ

Srinivas Rao BV
ಇಸ್ಲಾಮಾಬಾದ್: ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಭಾರತದ ಎಚ್ಚರಿಕೆಗೆ ಪಾಕಿಸ್ತಾನ ಬೆದರಿರುವಂತೆ ಕಂಡಿದ್ದು, ಒಪ್ಪಂದದಲ್ಲಿ ಯಾವುದೇ ಬದಲಾವಣೆಗಳಾದರೂ ಅದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 
ಸಿಂಧೂ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಪಾಕಿಸ್ತಾನದೊಂದಿಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಸಿಂಧೂ ನದಿ ನೀರು ಹಂಚಿಕೆಯಲ್ಲಿ ಯಾವುದೇ ಬದಲಾವಣೆಗಳನ್ನೂ ಒಪ್ಪುವುದಿಲ್ಲ ಎಂದು ಹೇಳಿದೆ. 
1960 ರಲ್ಲಿ ಸಹಿ ಹಾಕಲಾಗಿದ್ದ ಒಪ್ಪಂದದ ಪ್ರಕಾರ ಭಾರತಕ್ಕೆ ಬಿಯಾಸ್, ರಾವಿ ಮತ್ತು ಸಟ್ಲೆಜ್ ನದಿ ನೀರಿನ ಮೇಲೆ ನಿಯಂತ್ರಣ ಇದ್ದು, ಪಾಕಿಸ್ತಾನಕ್ಕೆ ಚೆನಾಬ್ ಸಿಂಧೂ, ಝೀಲಂ ನದಿಗಳ ನೀರಿನ ಮೇಲೆ ನಿಯಂತ್ರಣ ನೀಡಲಾಗಿದೆ. ಸಿಂಧೂ ನದಿ ನೀರು ಹಂಚಿಕೆ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿಶೇಷ ಸಹಾಯಕ ಅಧಿಕಾರಿ ತಾರಿಕ್ ಫತೇಮಿ,  ಸಿಂಧೂ ನದಿ ನೀರು ಒಪ್ಪಂದದ ವಿಷಯದಲ್ಲಿ ನಮ್ಮ ನಿಲುವು ಒಪ್ಪಂದದ  ತತ್ವಗಳಿಗೆ ಪೂರಕವಾಗಿದ್ದು, ಬದಲಾವಣೆ ಮಾಡಲು ಒಪ್ಪಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಸಿಂಧೂ ನದಿ ನೀರು ಹಂಚಿಕೆ 1960ರ ಒಪ್ಪಂದವನ್ನು ಉಭಯ ರಾಷ್ಟ್ರಗಳು ಉಲ್ಲಂಘಿಸುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ವಿಶ್ವ ಬ್ಯಾಂಕ್ ಈ ಹಿಂದೆ ಹೇಳಿತ್ತು. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ವಿಕಾಸ್ ಸ್ವರೂಪ್ ಅವರು, ಭಾರತ ಈ ಹಿಂದೆ ತಜ್ಞರ ತಂಡವೊಂದನ್ನು ನೇಮಕ ಮಾಡುವಂತೆ ವಿಶ್ವ ಬ್ಯಾಂಕ್ ಬಳಿ ಮನವಿ ಮಾಡಿತ್ತು. ಇದರಂತೆ ಪಾಕಿಸ್ತಾನ ಸರ್ಕಾರ ಕೂಡ ಉಭಯ ರಾಷ್ಟ್ರಗಳ ನಡುವೆ ಇರುವ ತಾಂತ್ರಿಕ ವ್ಯತ್ಯಾಸಗಳನ್ನು ತೀರ್ಮಾನಿಸುವಂತೆ ತಿಳಿಸಿತ್ತು. ಎರಡೂ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ಒಪ್ಪಂದಗಳನ್ನು ಸ್ಥಗಿತಗೊಳಿಸಲಾಗಿದೆ.
SCROLL FOR NEXT