ದೇಶ

ಮರ್ಯಾದೆ ಇಲ್ಲದ ರಾಹುಲ್ ಮಿತಿ ಮೀರಿ ಮಾತನಾಡುತ್ತಿದ್ದಾರೆ: ರವಿ ಶಂಕರ್ ಪ್ರಸಾದ್

Manjula VN

ನವದೆಹಲಿ: ಮರ್ಯಾದೆ ಇಲ್ಲದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೈತಿಕತೆಯ ಮಿತಿಗಳನ್ನು ಮೀರಿ ಮಾತನಾಡುತ್ತಿದ್ದಾರೆಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಶನಿವಾರ ಹೇಳಿದ್ದಾರೆ.

ನಿನ್ನೆಯಷ್ಟೇ ಗೋವಾದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ನೋಟಿ ನಿಷೇಧವೊಂದು ದೊಡ್ಡ ನಾಟಕವಾಗಿದ್ದು, ಕೇಂದ್ರ ಸರ್ಕಾರ ನಿರ್ಧಾರ ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧದ ಹೋರಾಟವಾಗಿಲ್ಲ. ಬದಲಾಗಿ ಶ್ರಮದಿಂದ ದುಡಿದು ಸಂಪಾದನೆ ಮಾಡುತ್ತಿರುವ ಪ್ರಮಾಣಿಕತೆ ಹಾಗೂ ಬಡವರ ವಿರುದ್ಧವಾಗಿದೆ ಎಂದು ಹೇಳಿದ್ದರು.

ಈ ಹೇಳಿಕೆ ವಿರುದ್ಧ ರವಿಶಂಕರ್ ಪ್ರಸಾದ್ ಅವರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿಯವರು ತಮ್ಮ ಘನತೆಗೂ ಮೀರಿ ಮಾತನಾಡುತ್ತಿದ್ದಾರೆ. ರಾಹುಲ್ ವರ್ತನೆ ನಾಚಿಕೆಗೇಡಿನ ವರ್ತನೆಯಾಗಿದ್ದು, ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ. 10 ವರ್ಷಗಳಿಂದ ಅವರ ಸರ್ಕಾರ ಭ್ರಷ್ಟಾಚಾರದಲ್ಲಿಯೇ ಮುಳುಗಿತ್ತು. ಪಕ್ಷದಲ್ಲಿಯೇ 2ಜಿ ಹಾಗೂ ಕಲ್ಲಿದ್ದಲು ಹಗರಣಗಳು ನಡೆಯುತ್ತಿದ್ದರೂ, ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ.

ರೈತರು ಸಾವನ್ನಪ್ಪುತ್ತಿದ್ದರೂ, ದೇಶದಲ್ಲಿರುವ ಹಣಗಳು ವಿದೇಶದಲ್ಲಿ ಭದ್ರವಾಗುತ್ತಿತ್ತು. ಆದರೂ, ಕಪ್ಪುಹಣವನ್ನು ಭಾರತಕ್ಕೆ ತರುವ ಪ್ರಯತ್ನಗಳನ್ನು ಕಾಂಗ್ರೆಸ್ ಮಾಡಿರಲಿಲ್ಲ. ಇದೀಗ ಮೋದಿ ಸರ್ಕಾರ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ. ವಿದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ತರಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇದಕ್ಕಾಗಿ ಎಸ್ಐಟಿ ತಂಡವನ್ನು ರಚನೆ ಮಾಡಿದೆ. ಭ್ರಷ್ಟ ಜನರು ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಭಯ ರಾಹುಲ್ ಗೆ ಬಂದಿದೆ. ಏಕೆಂದರೆ, ವಿದೇಶದಲ್ಲಿ ಕಪ್ಪುಹಣ ಹೂಡಿದ್ದವರನ್ನು ಅಂದಿನ ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡಿತ್ತು. ರಾಹುಲ್ ಎಂದಿಗೂ ಬಹಿರಂಗವಾಗಿ ಕಪ್ಪುಹಣದ ವಿರುದ್ಧ ಪ್ರತಿಭಟನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಕಪ್ಪುಹಣದ ವಿರುದ್ಧ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಮನಮೋಹನ್ ಸಿಂಗ್ ಅವರ 10 ವರ್ಷದ ಸರ್ಕಾರದಲ್ಲಿ, ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ಸೋನಿಯಾ ಗಾಂಧಿಯಾಗಲಿ ಅಥವಾ ರಾಹುಲ್ ಗಾಂಧಿಯಾಗಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಭ್ರಷ್ಟರನ್ನು ಕಾಂಗ್ರೆಸ್ ರಕ್ಷಣೆ ಮಾಡಿತ್ತು. ಇದೀಗ ರಾಹುಲ್ ಅಂದು ನಮ್ಮ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿತ್ತು ಎಂದು ಹೇಳುತ್ತಿದ್ದಾರೆ. ಇದು ಶುದ್ಧ ಸುಳ್ಳು. ಪ್ರಯೋಜನವಿಲ್ಲದ ಹೇಳಿಕೆಯನ್ನು ರಾಹುಲ್ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಸರ್ಕಾರವನ್ನು ಹೊಗಳಿರುವ ಅವರು, ಮೋದಿ ಸರ್ಕಾರ ಯಾವ ರೀತಿಯ ಕೆಲಸ ಮಾಡುತ್ತಿದೆ ಎಂದು ದೇಶಕ್ಕೆ ಗೊತ್ತಾಗುತ್ತಿದೆ. ಕಪ್ಪುಹಣದ ವಿರುದ್ಧ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು ತಿಳಿಯುತ್ತಿದೆ. ಪ್ರತೀನಿತ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲೂ ಇದು ಮುಂದುವರೆಯಲಿದೆ. ಇಡೀ ದೇಶ ಇಂದು ಮೋದಿಯವರೊಂದಿಗಿದೆ ಎಂದು ಹೇಳಿದ್ದಾರೆ.

SCROLL FOR NEXT