ಚೆನ್ನೈ: ರಜೆ ನೀಡಲು ಮೇಲಧಿಕಾರಿಗಳು ನಿರಾಕರಿಸಿದ್ದ ಕಾರಣಕ್ಕೆ ಬೇಸತ್ತ ಪೇದೆಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ಭಾನುವಾರ ನಡೆದಿದೆ.
ಆರ್. ಗೋಪಿನಾಥ್ (25) ಆತ್ಮಹತ್ಯೆ ಮಾಡಿಕೊಂಡ ಪೇದೆಯಾಗಿದ್ದಾರೆ. ಇಂದು ಬೆಳಿಗ್ಗೆ 4.30ರ ಸುಮಾರಿಗೆ ಪೇದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಘಟನೆ ನಡೆದ ಸ್ಥಳದಲ್ಲಿ ಯಾರೊಬ್ಬರು ಇರಲಿಲ್ಲ. ಗುಂಡು ಹಾರಿದ ಶಬ್ಧ ಯಾರಿಗೂ ಕೇಳಿಸಿರಲಿಲ್ಲ. ಸಹೋದ್ಯೋಗಿಯೊಬ್ಬರು ಸ್ಥಳಕ್ಕೆ ಹೋದಾಗಲೇ ಘಟನೆ ಬೆಳಕಿಗೆ ಬಂದಿತ್ತು. ಬೆಳಗಿನ ಜಾವ ಘಟನೆ ನಡೆದಿದ್ದರಿಂದ ಸ್ಥಳದಲ್ಲಿ ಕತ್ತಲೆಯಿತ್ತು. ಬೆಳಕಾದ ನಂತರ ಸಹೋದ್ಯೋಗಿಗಳು ಗೋಪಿನಾಥ್ ಗಾಗಿ ಹುಡುಕಾಡಿದ್ದಾರೆ. ಈ ವೇಳೆ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೆಲ ಮೂಲಗಳು ತಿಳಿಸಿರುವ ಪ್ರಕಾರ, ಕೆಲ ದಿನಗಳಿಂದ ಗೋಪಿನಾಥ್ ಅನಾರೋಗ್ಯಕ್ಕೀಡಾಗಿದ್ದು, ರಜೆ ಬೇಕೆಂದು ಹಿರಿಯ ಅಧಿಕಾರಿಗಳ ಬಳಿ ಮನವಿ ಮಾಡಿದ್ದ. ಆದರೆ, ರಜೆ ನೀಡಲು ಅಧಿಕಾರಿಗಳು ನಿರಾಕರಿಸಿದ್ದರಿಂದಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಹಿರಿಯ ಅಧಿಕಾರಿಗಳು, ಆತ್ಮಹತ್ಯೆಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ಗೋಪಿನಾಥ್ ಮಧುರೈನಲ್ಲಿರುವ ತನ್ನ ಮನೆಗೆ ಹೋಗುವ ಸಲುವಾಗಿ ಡಿಸೆಂಬರ್ 15 ರಿಂದ 18 ರವರೆಗೂ ರಜೆ ತೆಗೆದುಕೊಂಡಿದ್ದ. ಡಿಸೆಂಬರ್ 19 ರಂದು ಕರ್ತವ್ಯಕ್ಕೆ ಹಾಜರಾಗಿದ್ದ. ನಂತರ ತಲೆ ನೋವಿರುವುದಾಗಿ ಹೇಳಿಕೊಂಡಿಲ್ಲ. ಪ್ರಸ್ತುತ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆ ನಂತರವಷ್ಟೇ ಸತ್ಯಾಂಶ ತಿಳಿದುಬರಲಿದೆ ಎಂದು ಹೇಳಿದ್ದಾರೆ.