ಮುಂಬೈ: ಶೀನಾ ಬೊರಾ ಹತ್ಯೆಯ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರಿಗೆ ಮಂಗಳವಾರ ತಮ್ಮ ತಂದೆಯ ಅಂತಿಮ ಸಂಸ್ಕಾರ ಕಾರ್ಯಗಳನ್ನು ನಡೆಸಲು ಜೈಲಿನಿಂದ ಒಂದು ದಿನದ ಮಟ್ಟಿಗೆ ಹೊರಗೆ ಹೊಗಲು ಸಿಬಿಐ ವಿಶೇಷ ನ್ಯಾಯಾಲಯ ಅವಕಾಶ ನೀಡಿದೆ.
ಸಿಬಿಐ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಬಿಗಿ ಭದ್ರತೆಯೊಂದಿಗೆ ಅವರನ್ನು ಹೊರಗೆ ಬಿಡಲಾಗಿದ್ದು ಬೆಳಗ್ಗೆಯಿಂದ ಸಾಯಂಕಾಲದವರೆಗೆ ತಮ್ಮ ಇಷ್ಟದ ಸ್ಥಳದಲ್ಲಿ ಅಂತಿಮ ವಿಧಿ ಕಾರ್ಯಗಳನ್ನು ನಡೆಸಲು ಅನುವು ಮಾಡಿಕೊಡಲಾಗಿದೆ.
ಇದೇ ಸಂದರ್ಭದಲ್ಲಿ ಬೇರೆಯವರ ಜೊತೆ ಮತ್ತು ಮಾಧ್ಯಮದ ಎದುರು ಮಾತನಾಡುವುದಕ್ಕೆ ಇಂದ್ರಾಣಿ ಮುಖರ್ಜಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಕೇಸಿನ ವಿಚಾರಣೆಗೆ ಅಡೆತಡೆಯನ್ನುಂಟುಮಾಡುವ ಯಾವುದೇ ಚಟುವಟಿಕೆಗಳಲ್ಲಿಯೂ ತೊಡಗದಂತೆ ಕೋರ್ಟ್ ಷರತ್ತು ವಿಧಿಸಿದೆ.
ಶೀನಾ ಬೊರಾ ಹತ್ಯೆಯಲ್ಲಿ ಇಂದ್ರಾಣಿ ಮುಖರ್ಜಿಯವರಿಗೆ ನೆರವು ನೀಡಿದ್ದಾಗಿ ಅವರ ಮಾಜಿ ಕಾರು ಚಾಲಕ ತಪ್ಪೊಪ್ಪಿಕೊಂಡಿದ್ದರಿಂದ ಶೀನಾ ಬೊರಾ ಹತ್ಯೆ ಪ್ರಕರಣ ಕಳೆದ ವರ್ಷ ಬೆಳಕಿಗೆ ಬಂದಿತ್ತು. ತನ್ನ ಮಾಜಿ ಪತಿ ಸಂಜೀವ್ ಖನ್ನಾ ಸಹಾಯದಿಂದ ಇಂದ್ರಾಣಿ ಶೀನಾ ಬೊರಾಳನ್ನು ಕತ್ತು ಹಿಸುಕಿ ಸಾಯಿಸಿದ ಆರೋಪ ಎದುರಿಸುತ್ತಿದ್ದಾರೆ.