ಕಲ್ಲಿದ್ದಲು ಗಣಿ ಕುಸಿದು ವಾಹನ ಅವಶೇಷಗಳಡಿ ಸಿಲುಕಿರುವುದು
ರಾಂಚಿ: ಕಲ್ಲಿದ್ದಲು ಗಣಿ ಕುಸಿದ ಪರಿಣಾಮ ಸುಮಾರು 50 ಜನ ಕಾರ್ಮಿಕರು ಮತ್ತು 40ಕ್ಕೂ ಹೆಚ್ಚು ವಾಹನಗಳು ಮಣ್ಣಿನ ಅವಶೇಷಗಳಡಿ ಸಿಕ್ಕಿಬಿದ್ದ ದಾರುಣ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ಕಳೆದ ರಾತ್ರಿ ನಡೆದಿದೆ. ರಕ್ಷಣಾ ಕಾರ್ಯ ಇಂದು ಬೆಳಗ್ಗೆಯಿಂದ ಭರದಿಂದ ಸಾಗಿದೆ.
ಜಾರ್ಖಂಡ್ ನ ಗೊದ್ದಾ ಜಿಲ್ಲೆಯ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ನ ಲಾಲ್ ಮಾಟಿಯಾ ಗಣಿಯ ಪ್ರವೇಶ ಕೇಂದ್ರದಲ್ಲಿ ಮಣ್ಣಿನ ರಾಶಿ ಕುಸಿದು ಈ ಅವಘಡ ಸಂಭವಿಸಿದೆ.
40ಕ್ಕೂ ಹೆಚ್ಚು ವಾಹನಗಳು ಸಿಕ್ಕಿ ಹಾಕಿಕೊಂಡಿದೆ. ಘಟನೆ ನಿನ್ನೆ ರಾತ್ರಿ ನಡೆದಿದ್ದರೂ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಗಲಿಲ್ಲ.
ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ(ಎನ್ ಡಿಆರ್ಎಫ್) ತಂಡ ಪಾಟ್ನಾದಿಂದ ರಕ್ಷಣಾ ಕಾರ್ಯಕ್ಕೆ ಸ್ಥಳಕ್ಕೆ ಧಾವಿಸಿದೆ.
ಜಾರ್ಖಂಡ್ ಮುಖ್ಯಮಂತ್ರಿ ರಘುವೀರ್ ದಾಸ್ ಪರಿಸ್ಥಿತಿಯನ್ನು ಅತ್ಯಂತ ಹತ್ತಿರದಿಂದ ಗಮನಿಸುತ್ತಿದ್ದು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಕ್ಷಣಾ ಕಾರ್ಯ ಮುಂದುವರಿದಿದ್ದು ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಇಂಧನ ಮತ್ತು ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಗಣಿಯ ಅವಶೇಷಗಳಡಿ ಎಷ್ಟು ಜನ ಮತ್ತು ವಾಹನಗಳು ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಇದುವರೆಗೆ ಗೊತ್ತಾಗಿಲ್ಲ, ರಕ್ಷಣಾ ಕಾರ್ಯ ಮುಗಿದ ಮೇಲೆ ಗೊತ್ತಾಗಲಿದೆ ಎಂದು ಗೊಡ್ಡ ಪೊಲೀಸ್ ಸೂಪರಿಂಟೆಂಡೆಂಟ್ ಹರಿಲಾಲ್ ಚೌಹಾನ್ ತಿಳಿಸಿದ್ದಾರೆ.
ಮಣ್ಣಿನ ರಾಶಿಯ ಮೇಲೆ ಬಿರುಕು ಮೂಡಿದ್ದು ಅದು ಕುಸಿದು ಬಿದ್ದು ಗಣಿಯ ಪ್ರವೇಶ ಕೇಂದ್ರ ಸಂಪೂರ್ಣ ಬಂದ್ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ನೆಲದಿಂದ ಸುಮಾರು 200 ಅಡಿ ಕೆಳಗೆ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos