ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತಮ್ಮನ್ನು ಪಕ್ಷದಿಂದ ಉಚ್ಛಾಟಿಸಿರುವುದು ಕಾನೂನು ಬಾಹಿರ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ತಮ್ಮನ್ನು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಲೇಶ್ ಯಾದವ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಮ್ ಗೋಪಾಲ್ ಯಾದವ್ ಅವರು, ಮುಲಾಯಂ ಸಿಂಗ್ ಯಾದವ್ ಅವರಿಗೆ ಪಕ್ಷದ ಸಂವಿಧಾನದ ಬಗ್ಗೆ ಸರಿಯಾಗಿ ಹೊತ್ತಿಲ್ಲ. ತಾವು ಈಗಲೂ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಹೇಳಿದ್ದಾರೆ.
ಶೋಕಾಸ್ ನೋಟಿಸ್ ನೀಡಿ, ಅವರ ಅಭಿಪ್ರಾಯ ಪಡೆದುಕೊಳ್ಳದೇ ಕೆಲವೇ ಗಂಟೆಗಳಲ್ಲಿ ಪಕ್ಷದಿಂದ ಉಚ್ಛಾಟಿಸುವುದು ಕಾನೂನು ಬಾಹಿರ ಎಂದು ರಾಮ್ ಗೋಪಾಲ್ ಯಾದವ್ ಅವರು ತಿಳಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರು ಪಕ್ಷಕ್ಕೆ ನಾನು ನೀಡಿದ ಕೊಡುಗೆಯನ್ನು ಪ್ರಶ್ನಿಸಿದ್ದಾರೆ. ಆದರೆ ಅವರು ಪ್ರತಿಭಾರಿ ಮತ ಕೇಳಲು ಹೋದಾಗ ನನ್ನ ಕರೆದೊಯ್ಯುತ್ತಿದ್ದರು ಎಂದಿದ್ದಾರೆ.