ದೇಶ

ಒವೈಸಿ ಬೆಂಬಲಿಗರಿಂದ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ

Srinivasamurthy VN

ಹೈದರಾಬಾದ್: ಹೈದರಾಬಾದ್ ಮುನ್ಸಿಪಾಲಿಟಿ ಚುನಾವಣೆ ವೇಳೆ ಎಐಎಂಐಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಅಸಾದುದ್ದೀನ್ ಒವೈಸಿ ಬೆಂಬಲಿಗರು  ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಉತ್ತಮ್ ಕುಮಾರ್ ರೆಡ್ಡಿ ಮತ್ತು ಮಹಮದ್ ಅಲಿ ಶಬ್ಬೀರ್ ಸೇರಿದಂತೆ ಹಲವು ಕಾರ್ಯಕರ್ತರಿಗೆ ಗಾಯಗಳಾಗಿವೆ ಎಂದು  ತಿಳಿದುಬಂದಿದೆ. ಘಟನೆಯಲ್ಲಿ ಉತ್ತಮ್ ಕುಮಾರ್ ರೆಡ್ಡಿ ಅವರ ಕಾರು ಜಖಂಗೊಂಡಿದ್ದು, ಘಟನೆ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಮೂಕ ಪ್ರೇಕ್ಷರಾಗಿದ್ದರು ಎಂದು ತಿಳಿದುಬಂದಿದೆ.  ಮೀರ್  ಚೌಕ್ ಠಾಣೆಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮಹಮದ್ ಘೌಸ್ ಅವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗುವ ವೇಳೆ ಅಲ್ಲಿಗೆ ಆಗಮಸಿದ ಒವೈಸಿ  ಮತ್ತು ಅವರ ಸುಮಾರು 200 ಬೆಂಬಲಿಗರು ಕಾಂಗ್ರೆಸ್ ಮುಖಂಡರೊಂದಿಗೆ  ವಾಗ್ವಾದಕ್ಕಿಳಿದಿದ್ದಾರೆ.

ಈ ವೇಳೆ ಎರಡೂ ಕಡೆಯ ಬೆಂಬಲಿಗರು ಪರಸ್ಪರ ಬಡಿದಾಡಿಕೊಂಡಿದ್ದು, ಕಾಂಗ್ರೆಸ್ ನಾಯಕರಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ. ಈ ವೇಳೆ ಕೆಲ ಒವೈಸಿ ಬೆಂಬಲಿಗರು ಉತ್ತಮ್  ಕುಮಾರ್ ರೆಡ್ಡಿ ಅವರ ಕಾರನ್ನು ಜಖಂಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಉಭಯ ಪಕ್ಷಗಳ ಕಾರ್ಯಕರ್ತರ ಜಟಾಪಟಿ ಮಿತಿ ಮೀರುತ್ತಿದ್ದಂತೆಯೇ  ಪೊಲೀಸರು ಲಾಠಿ ಚಾರ್ಜ್ ಮಾಡಿ  ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಸ್ತುತ ಒವೈಸಿ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಾಗಿದೆ.

SCROLL FOR NEXT