ದೇಶ

ಹಾಸ್ಯ ನಟ ಮದುರೈ ಮುತ್ತು ಪತ್ನಿ ಅಪಘಾತದಲ್ಲಿ ನಿಧನ

Manjula VN

ಶಿವಗಂಗಾ: ತಮ್ಮ ಹಾಸ್ಯದ ಮೂಲಕವೇ ತಮಿಳುನಾಡಿನಾದ್ಯಂತ ಹೆಸರು  ಮಾಡಿದ್ದ ಹಾಸ್ಯ ನಟ ಮದುರೈ ಮುತ್ತು ಅವರ ಪತ್ನಿ ವೈಯಮ್ಮಳ್(32) ಅಪಘಾತವೊಂದರಲ್ಲಿ ಸಾವನ್ನಪ್ಪಿರುವ ಘಟನೆ ಕೊಟ್ಟೈಯಿರುಪ್ಪು ಪ್ರದೇಶದಲ್ಲಿ ಗುರುವಾರ ನಡೆದಿದೆ.

ನಿನ್ನೆ ಬೆಳಿಗ್ಗೆ ವೈಯಮ್ಮಳ್ ಅವರು ತಮ್ಮ ಕಾರು ಚಾಲಕನೊಂದಿಗೆ ಶಿವಗಂಗಾ ಜಿಲ್ಲೆಯಲ್ಲಿರುವ ತಿರುಪ್ಪತೂರಿನ ಪಿಲ್ಲಿಯಾರ್ಪತ್ತಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಕಾರು ಕೊಟ್ಟೈಯಿರುಪ್ಪು ಪ್ರದೇಶಕ್ಕೆ ಹೋಗುತ್ತಿರುವಾಗ ಕಾರಿನ ಹಿಂಭಾಗದ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಚಾಲಕ ಕಾರಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ನಂತರ ಕಾರು ರಸ್ತೆಯ ಬಳಿಯಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೈಯಮ್ಮಳ್ ಅವರು ತೀವ್ರವಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಚಾಲಕ ಕೂಡ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಆತನನ್ನು ತಿರುಪ್ಪತ್ತೂರಿನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಆತನ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಮದುರೈ ನ ಜಿಆರ್ ಹೆಚ್ ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಮೂಲಗಳ ಪ್ರಕಾರ ವೈಯಮ್ಮಳ್ ಅವರ ಪತಿ ಹಾಸ್ಯ ನಟ ಮುತ್ತು ಅವರು ಕಾರ್ಯಕ್ರಮವೊಂದಕ್ಕೆ ಭೇಟಿ ನೀಡುವ ಸಲುವಾಗಿ ವಿದೇಶಕ್ಕೆ ಹೋಗಿದ್ದರು. ತಮ್ಮ ಪತ್ನಿ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಮುತ್ತು ಅವರು ಕಾರ್ಯಕ್ರಮವನ್ನು ರದ್ದು ಮಾಡಿ ಮದುರೈಗೆ ಹಿಂತಿರುಗಿ ಬಂದಿದ್ದಾರೆಂದು  ತಿಳಿದುಬಂದಿದೆ.

SCROLL FOR NEXT