ದೇಶ

ಭಾರತ ದೇಶದಲ್ಲಿ ಅಸಹಿಷ್ಣುತೆ ಇಲ್ಲ; ಜನರಲ್ಲಿದೆ: ತಸ್ಲಿಮಾ ನಸ್ರೀನ್

Sumana Upadhyaya

ಕೋಝಿಕ್ಕೋಡು(ಕೇರಳ): '' ಭಾರತ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ನಾನು ಭಾವಿಸುವುದಿಲ್ಲ. ಇಲ್ಲಿ ಪ್ರತಿಯೊಬ್ಬರೂ ಪರಸ್ಪರರ ನಂಬಿಕೆಗಳನ್ನು ಗೌರವಿಸುತ್ತಾರೆ. ಭಾರತದಲ್ಲಿರುವ ಕಾನೂನುಗಳು ಅಸಹಿಷ್ಣುತೆಯನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ ಇಲ್ಲಿ ಅನೇಕ ಜನರು ಅಸಹಿಷ್ಣುಗಳಾಗಿದ್ದಾರೆ ಎಂದು ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ.

ಬಾಂಗ್ಲಾದೇಶದಿಂದ ಗಡಿಪಾರುಗೊಂಡಿರುವ ಖ್ಯಾತ ಲೇಖಕಿ ತಸ್ಲಿಮಾ ಕೋಝಿಕೋಡಿನಲ್ಲಿ ಕೇರಳ ರಾಜ್ಯದ ಮೊದಲ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದರು. ಅಸಲಿಗೆ 2005ರಲ್ಲಿ ಅವರು ಭಾರತಕ್ಕೆ ಬಂದ ನಂತರ ದೆಹಲಿ ಬಿಟ್ಟು ಬೇರೆ ಕಡೆಗೆ ಹೋಗುತ್ತಿರುವುದು ಇದೇ ಮೊದಲು.

ಖ್ಯಾತ ಬರಹಗಾರ ಸಚ್ಚಿದಾನಂದನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಸ್ಲಿಮಾ ನಸ್ರೀನ್, ಭಾರತದಲ್ಲಿ ಯಾಕೆ ಜಾತ್ಯತೀತವಾದಿಗಳು ಹಿಂದೂ ಮೂಲಭೂತವಾದಿಗಳನ್ನು ಮಾತ್ರ ಪ್ರಶ್ನೆ ಮಾಡುತ್ತಾರೆ? ಮುಸ್ಲಿಂ ಮೂಲಭೂತವಾದಿಗಳನ್ನು ಯಾಕೆ ಪ್ರಶ್ನಿಸದೆ ಸುಮ್ಮನೆ ಬಿಡುತ್ತಾರೆ? ಎಂದು ಮರು ಪ್ರಶ್ನೆ ಮಾಡಿದರು. ಹುಸಿ ಜಾತ್ಯತೀತತೆ ಮೇಲೆ ನಿಂತಿರುವ ಪ್ರಜಾಪ್ರಭುತ್ವ ನಿಜವಾದ ಪ್ರಭುತ್ವವಲ್ಲ. ಭಾರತದಲ್ಲಿ ಸಂಘರ್ಷ ಹುಟ್ಟಿಕೊಳ್ಳುವುದು ಜಾತ್ಯತೀತತೆ ಮತ್ತು ಮೂಲಭೂತವಾದ, ಸಂಶೋಧನೆ ಮತ್ತು ಸಂಪ್ರದಾಯ, ಮಾನವೀಯತೆ ಮತ್ತು ಒರಟುತನದ ನಡುವೆ. ಮತ್ತು ಸ್ವಾತಂತ್ರ್ಯವನ್ನು ಯಾರು ಪ್ರೀತಿಸುತ್ತಾರೆಯೋ, ಯಾರು ಪ್ರೀತಿಸುವುದಿಲ್ಲವೋ ಅವರ ಮಧ್ಯೆ ಎಂದು ಹೇಳಿದರು. ಉತ್ತರ ಪ್ರದೇಶದ ದಾದ್ರಿ ಘಟನೆಯನ್ನು ಬಲವಾಗಿ ಖಂಡಿಸಿದ ಅವರು ಬುದ್ಧಿಜೀವಿಗಳು ದೇಶಾದ್ಯಂತ ಪ್ರತಿಭಟಿಸಿದ ರೀತಿಯನ್ನು ಶ್ಲಾಘಿಸಿದರು.

ಬಾಂಗ್ಲಾದೇಶದಲ್ಲಿ ಬರಹಗಾರ್ತಿಯಾಗಿ ತಾವು ನಡೆಸಿದ ಹೋರಾಟ ಮತ್ತು ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು, ಮೂಲಭೂತವಾದಿಗಳ ವಾದ ಸೇರ್ಪಡೆಗೊಂಡರೂ ಸಹ ಎಲ್ಲಾ ಧರ್ಮಗಳು ಮಹಿಳೆಯರ ವಿರುದ್ಧವಾಗಿ ಇವೆ.  ಧರ್ಮವನ್ನು ಯಾವತ್ತೂ ಸರ್ಕಾರದಿಂದ ಪ್ರತ್ಯೇಕಿಸಿಯೇ ನೋಡಬೇಕು. ಕಾನೂನು ಧರ್ಮದ ತಳಹದಿಯ ಮೇಲೆ ನಿಲ್ಲಬಾರದು. 7ನೇ ಶತಮಾನದಲ್ಲಿದ್ದ ಆಚರಣೆ, ಸಂಪ್ರದಾಯಗಳು 21ನೇ ಶತಮಾನಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಾಂಗ್ಲಾದೇಶದಲ್ಲಿ ಧರ್ಮ ಹೇಗೆ ಕಾನೂನು ರಚನೆ ಮೇಲೆ ಪ್ರಭಾವ ಬೀರಿ ಮುಸ್ಲಿಂ ಮತ್ತು ಹಿಂದೂ ಮಹಿಳೆಯರನ್ನು ತುಳಿಯಲು ಹೇಗೆ ಕಾರಣವಾಯಿತು ಎಂಬುದನ್ನು ವಿವರಿಸಿದರು. ಆದರೆ ಭಾರತದಲ್ಲಿ ಕಾನೂನು ಸಮಾನತೆಯ ತಳಹದಿಯ ಮೇಲೆ ನಿಂತಿದ್ದು, ಇಲ್ಲಿನ ಮಹಿಳೆಯರ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಬಾಂಗ್ಲಾದೇಶದಲ್ಲಿ ಉತ್ತಮ ಮಹಿಳಾ ಬರಹಗಾರರ ಕೊರತೆ ಕೂಡ ಇದೆ ಎಂದು ಹೇಳಿದ ತಸ್ಲೀಮಾ ನಸ್ರೀನ್ ತಾವು ಮೂಲಭೂತವಾದವನ್ನು ವಿರೋಧಿಸುವುದಾಗಿ ತಿಳಿಸಿದರು.

SCROLL FOR NEXT