ಗುರ್ ಗಾಂವ್: ತನ್ನ ಪತ್ನಿ ಸಹೋದರಿ ಗೆಳೆಯನೊಂದಿರುವುದನ್ನು ನೋಡಿ ಕೆಂಡಾಮಂಡಲವಾದ ಭಾವನೊಬ್ಬ ಆಕೆಯ ಗೆಳೆಯನ್ನು ಥಳಿಸಿ ಕಟ್ಟಡದಿಂದ ಕೆಳಗೆ ಹಾಕಿರುವ ಘಟನೆಯೊಂದು ಗುರ್ ಗಾಂವ್ ನಲ್ಲಿ ಭಾನುವಾರ ನಡೆದಿದೆ.
ಈಶ್ವರ್ (27) ಮೃತ ವ್ಯಕ್ತಿಯಾಗಿದ್ದು, ಈತ ವಿವಾಹಿತ ವ್ಯಕ್ತಿಯಾಗಿದ್ದಾನೆ. ವಾಯುವ್ಯ ದೆಹಲಿಯ ಜಹಾಂಗಿರ್ಪುರದಲ್ಲಿ ಗಾರ್ಮೆಂಟ್ಸ್ ನಡೆಸುತ್ತಿರುವ ಈಶ್ವರ್ 6 ತಿಂಗಳ ಹಿಂದಷ್ಟೇ ಫೇಸ್ ಬುಕ್ ಮೂಲಕ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಯುವತಿ ಕೂಡ ಈತನನ್ನು ಇಷ್ಟಪಟ್ಟಿದ್ದು, ನಿನ್ನೆ ಪ್ರೇಮಿಗಳ ದಿನವಾಗಿದ್ದರಿಂದ ಈಶ್ವರ್ ಯುತಿಯನ್ನು ಭೇಟಿಯಾಗಲು ಬಂದಿದ್ದಾನೆ. ಈ ವೇಳೆ ಈಶ್ವರ್ ಯುವತಿಯಿದ್ದ ಫ್ಲ್ಯಾಟ್ ಗೆ ಹೋಗಿದ್ದಾನೆ.
ರಾತ್ರಿ 8.30ರ ಸುಮಾರಿಗೆ ಯುವತಿಯ ಭಾವ, ಹಾಗೂ ಆತನ ಗೆಳೆಯರಾದ ರಮೇಶ್, ಅನಿಲ್ ಎಂಬುವವರು ಯುವತಿಯಿದ್ದ ಫ್ಲ್ಯಾಟ್ ಗೆ ಬಂದಿದ್ದಾರೆ. ಈ ವೇಳೆ ಯುವತಿ ಗೆಳೆಯನೊಂದಿಗಿರುವುದನ್ನು ಕಂಡ ಆಕೆಯ ಭಾವ ಗೆಳೆಯರೊಂದಿಗೆ ಸೇರಿ ಈಶ್ವರನನ್ನು ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ, ಕೋಪದಲ್ಲಿ ಆತನನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದಿದ್ದಾರೆ.
ಆತ ಕೆಳಗೆ ಬೀಳುತ್ತಿರುವುದನ್ನು ಕಂಡು ಭಯಭೀತರಾಗಿ ನಂತರ ಈಶ್ವರ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಕಾರಣ ಕೇಳಿದಾಗ ಅಪಘಾತವಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಅನುಮಾನಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಘಟನೆ ಕುರಿತಂತೆ ಮಾತನಾಡಿರುವ ಅಧಿಕಾರಿಗಳು, ಪ್ರಕರಣದಲ್ಲಿ ಈಶ್ವರ್ ವಿವಾಹಿತನಾಗಿದ್ದನು ಎಂಬ ವಿಷಯ ಯುವತಿಗೆ ತಿಳಿದಿತ್ತೋ ಇಲ್ಲವೋ ಎಂಬುದು ಈವರೆಗೂ ತಿಳಿದುಬಂದಿಲ್ಲ. ಇದೀಗ ಹತ್ಯೆ ಮಾಡಿದ ರಾಜಸ್ತಾನ ಮೂಲದ ರಮೇಶ್ ಹಾಗೂ ಅನಿಲ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ 302 ಕೊಲೆ, 201 (ಸಾಕ್ಷ್ಯಾಧಾರ ನಾಶ) ಹಾಗೂ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಈಶ್ವರ ಅವರ ಮೃತ ದೇಹವನ್ನು ಆಹಮದಾಬಾದ್ ನಲ್ಲಿರುವ ಆತನ ತಂದೆಯವರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos