ದಶಕಗಳ ಯೋಜನೆ ಹುಬ್ಬಳ್ಳಿ-ಅಂಕೋಲ ರೈಲಿಗೆ ಗ್ರೀನ್ ಸಿಗ್ನಲ್
ನವದೆಹಲಿ: ದಶಕಗಳ ಹಿಂದಿನಿಂದಲೂ ನೆನೆಗುದಿಗೆ ಬಿದ್ದಿದ್ದ ವಿವಾದಿತ ಹುಬ್ಬಳ್ಳಿ-ಅಂಕೋಲಾ ನಡುವಿನ ಪ್ರಸ್ತಾವಿತ ರೈಲು ಮಾರ್ಗ ನಿರ್ಮಾಣ ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ (ಎನ್ ಜಿಟಿ) ನ್ಯಾಯಾಧೀಕರಣ ಅಸ್ತು ಎಂದಿದೆ.
ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗವು ಜೀವವೈವಿಧ್ಯತೆಯನ್ನು ಹೊಂದಿರುವ ಸೂಕ್ಷ್ಮ ತಾಣವಾದ ಪಶ್ಚಿಮ ಘಟ್ಟಕ್ಕೆ ಸಮಸ್ಯೆಯನ್ನೊಡ್ಡಲಿದೆ ಎಂದು ಹೇಳಿ ಪರಿಸರ ಪ್ರೇಮಿಗಳು ಈ ಯೋಜನೆಗೆ ಹಲವು ವಿರೋಧಗಳನ್ನು ವ್ಯಕ್ತಪಡಿಸಿದ್ದರು. ಈ ಯೋಜನೆ ಕಾರ್ಯಗತವಾದರೆ ಉತ್ತರ ಕರ್ನಾಟಕದ ಭಾಗದ ಜನರಿಗೆ ಉತ್ತಮ ಅವಕಾಶಗಳು ಸಿಗಲಿದೆ ಹಾಗೂ ಜನರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಉದ್ಯಮಿಗಳು ಹಾಗೂ ಅಧಿಕಾರಿಗಳು ತಮ್ಮ ವಾದವನ್ನು ಮಂಡಿಸಿದ್ದರು.
1998ರಿಂದಲೂ ಈ ವಿವಾದ ನೆಲಕಚ್ಚಿಕೊಂಡಿತ್ತು. ಬಳ್ಳಾರಿ-ಹೊಸಪೇಟೆ ಗಣಿಗಳಿಂದ ಕಬ್ಬಿಣದ ಅದಿರು ಸಾಗಿಸುವ ನಿಟ್ಟಿನಲ್ಲಿ 168 ಕಿ.ಮೀ.ದೂರದ ಈ ರೈಲೂ ಮಾರ್ದ ಕುರಿತಂತೆ ವರದಿ ಸಲ್ಲಿಸಲು ಸರ್ವೋಚ್ಛ ನ್ಯಾಯಾಲಯ ಕಳೆದ ವರ್ಷ ಕೇಂದ್ರ ಸಬಲೀಕರಣ ಸಮಿತಿ (ಸಿಇಸಿ) ರಚಿಸಿದ್ದ ಹಿನ್ನೆಲೆಯಲ್ಲಿ ಇದೀಗ ಹಸಿರು ಪೀಠ ನೀಡಿರುವ ಈ ಆದೇಶ ಮಹತ್ವವನ್ನು ಪಡೆದುಕೊಂಡಿದೆ.
ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಯನ್ನಾಗಿ ಪರಿವರ್ತಿಸಲು ಅರ್ಜಿಸಲ್ಲಿಸಬೇಕು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ರಾಜ್ಯ ಸರ್ಕಾರ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಪೂರ್ವಾನುಮತಿಯೊಂದಿಗೆ ಈ ಬಗ್ಗೆ ಆದೇಶ ನೀಡಬೇಕು ಎಂದು ಪೀಠ ಆದೇಶ ನೀಡಿದೆ. ಅಲ್ಲದೆ, ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಗೆ ರೈಲ್ವೆ ಇಲಾಖೆ ಕೈಗೊಳ್ಳಲು ಉದ್ದೇಶಿಸಿದ್ದ ಯೋಜನೆಗೆ ತಡೆ ವಿಧಿಸಲು ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ. ಇದರಂತೆ ಪೀಠ ನೀಡಿರುವ ಆದೇಶ ಅನ್ವಯ ಯೋಜನೆಗೆ ಈ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರ ಮುಂದಿನ ಕಾರ್ಯ ಕೈಗೊಳ್ಳಬಹುದಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos