ದೇಶ

ಪಟಿಯಾಲಾ ಹೌಸ್ ಕೋರ್ಟ್ ಹಲ್ಲೆ ಪ್ರಕರಣ: ಪರಿಸ್ಥಿತಿ ಅವಲೋಕನಕ್ಕೆ ಸಮಿತಿ ರಚಿಸಿದ ಸುಪ್ರೀಂ

Shilpa D

ನವದೆಹಲಿ: ಪಟಿಯಾಲ ಹೌಸ್‌ ಕೋರ್ಟ್‌ ಆವರಣದಲ್ಲಿ ಬುಧವಾರ ಮತ್ತೆ ಸಂಘರ್ಷ ನಡೆದ ಹಿನ್ನೆಲೆಯಲ್ಲಿ, ಪರಿಸ್ಥಿತಿ ಅವಲೋಕಿಸಲು ವಕೀಲರ ತಂಡವನ್ನು ರಚಿಸಿದೆ. ಜೊತೆಗೆ ಹತ್ತು ನಿಮಿಷಗಳಲ್ಲಿ ಪರಿಸ್ಥಿತಿ ಕಂಡುಕೊಂಡು ತಿಳಿಸುವಂತೆ ಆರು ಮಂದಿ ವಕೀಲರ ತಂಡಕ್ಕೆ ನ್ಯಾಯಾಲಯ ಸೂಚಿಸಿತು.

ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಭಯೋತ್ಪಾದಕ ವಾತಾವರಣ ಇತ್ತು ಎಂದು ಆರು ಮಂದಿ ತಂಡ ಹೇಳಿದೆ. ಜೊತೆಗೆ ಕೋರ್ಟ್ ಆವರಣದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ತೂರಲಾಗುತ್ತಿತ್ತು ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ. ಇನ್ನು ಘಟನೆಗೆ ಕಾರಣವಾದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆಯೂ ದೆಹಲಿ ಪೊಲೀಸ್ ಪರ ಹಾಜರಾಗಿದ್ದ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಕೂಡಲೇ ವಿಚಾರಣೆಯನ್ನು ಮುಂದೂಡಿ, ಕೋರ್ಟ್‌ ಕೊಠಡಿಯಲ್ಲಿದ್ದವರನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮ್ಯಾಜಿಸ್ಟ್ರೇಟ್‌ ಜತೆಗೆ ಮಾತನಾಡುವಂತೆ ದೆಹಲಿ ಪೊಲೀಸ್‌ ಪರ ವಕೀಲ ಅಜಿತ್ ಸಿನ್ಹಾ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ಆರೋಪಿ ಕನ್ಹಯ್ಯಾ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ನ್ಯಾಯಾಲಯದ ಗಮನಕ್ಕೆ ತಂದರು. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ, ಪರಿಸ್ಥಿತಿ ಅವಲೋಕನಕ್ಕೆ ಸ್ಥಳೀಯ ಆಯುಕ್ತರೊಬ್ಬರನ್ನು ನೇಮಿಸುವ ಎಚ್ಚರಿಕೆಯನ್ನೂ ನೀಡಿತು.

SCROLL FOR NEXT