ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ
ಚೆನ್ನೈ: 2011ರ ವಿಧಾನಸಭಾ ಚುನಾವಣೆ ವೇಳೆ ನೀಡಲಾಗಿದ್ದ ಆಶ್ವಾಸನೆಯನ್ನು ಇದೀಗ ಮುಖ್ಯಮಂತ್ರಿ ಜಯಲಲಿತಾ ಅವರು ಈಡೇರಿಸಿದ್ದು, ಇನ್ನು ಮುಂದೆ ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳು ಹಿರಿಯ ನಾಗರಿಕರಿಗೆ ಉಚಿತವಾಗಿ ಸೇವೆ ಸಲ್ಲಿಸಲಿದೆ.
ಇದೀಗ ತಮಿಳುನಾಡಿನ ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಜಯಲಲಿತಾ ಅವರು ಒಪ್ಪಿಗೆ ಸೂಚಿಸಿದ್ದು, ಫೆಬ್ರವರಿ 24 ಜಯಲಲಿತಾ ಅವರು ಹುಟ್ಟುಹಬ್ಬದಂದು ಯೋಜನೆ ಅಧಿಕೃತವಾಗಿ ಜಾರಿಯಾಗಲಿದೆ. ಯೋಜನೆಯಡಿಯಲ್ಲಿ ಹಿರಿಯ ನಾಗರಿಕರು ತಿಂಗಳಿಗೆ 10 ಬಾರಿ ಉಚಿತವಾಗಿ ಸಂಚರಿಸಬಹುದಾಗಿದೆ.
ಯೋಜನೆಯ ಕುರಿತಂತೆ ಮಾಹಿತಿ ನೀಡಿರುವ ಜಯಲಲಿತಾ ಅವರು, ಹಿರಿಯ ನಾಗರಕರಿಗೆ ಫೋಟೋ ಇರುವ ಗುರ್ತಿನ ಕಾರ್ಡ್ ವೊಂದನ್ನು ನೀಡಲಾಗುತ್ತದೆ. ಪ್ರತಿ ತಿಂಗಳು 10 ಟೋಕನ್ ಗಳನ್ನು ನೀಡಲಾಗುತ್ತದೆ. ಈ ಟೋಕನ್ ಗಳನ್ನು ಬಸ್ ನಿರ್ವಾಹಕರಿಗೆ ನೀಡಿದರೆ ಯಾವುದೇ ಟಿಕೆಟ್ ಪಡೆಯುವ ಅವಶ್ಯಕತೆಗಳು ಇರುವುದಿಲ್ಲ. ಯೋಜನೆಯ ಫಲ ಪಡೆಯಲು ಬಯಸುವ ನಾಗರಿಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಇದಲ್ಲದೆ, ಅರ್ಜಿಗಳು ಬಸ್ ಡಿಪೋಗಳಲ್ಲೂ ಲಭ್ಯವಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ನೋಡಿ ಇನ್ನಿತರೆ ಪ್ರದೇಶಗಳಲ್ಲು ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.