ನವದೆಹಲಿ: ಭಾರತದಲ್ಲಿ ಮುಸ್ಲಿಮರ ಸ್ಥಿತಿ ಉತ್ತಮವಾಗಿದ್ದು, ಪ್ರಪಂಚದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಎಂದು ಅಗ್ರ ಜಿಹಾದಿ ನಾಯಕ ಅಬ್ದುಲ್ ಅಜೀಜ್ ಹೇಳಿದ್ದಾನೆ.
ಭಾರತದಲ್ಲಿ ಜಿಹಾದ್ ಸಾರುವಂತೆ 1997ರಲ್ಲಿ ಪಾಕಿಸ್ತಾನಿ ಲಷ್ಕರೆ ಇ ತಯ್ಬಾದ ನಿರ್ವಾಹಕ ಸಲೀಂ ಜುನೈದಾ ಒತ್ತಡ ಹೇರಿದಾಗ, 'ಯುದ್ಧ ನಡೆಸಬೇಕಾದ ಅಗತ್ಯ ಇಲ್ಲ. ಇತರ ರಾಷ್ಟ್ರಗಳಲ್ಲಿ ಮುಸ್ಲಿಮರು ಎದುರಿಸುತ್ತಿರುವಂಥ ಸಮಸ್ಯೆ ಭಾರತದಲ್ಲಿ ಇಲ್ಲ,' ಎಂದು ಅಜೀಜ್ ಹೇಳಿದ್ದಾಗಿ ತಿಳಿಸಿದ್ದಾನೆ.
ಸೌದಿ ಮೂಲದ ಎನ್ಜಿಓ ಇಂಟರ್ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಆರ್ಗನೈಸೇಷನ್ ನಿರ್ದೇಶಕ ಶೇಖ್ ಅಹ್ಮದ್ ಅವರ ಒತ್ತಡಕ್ಕೆ ಮಣಿದ ಅಜೀಜ್, ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಪ್ರತೀಕಾರವಾಗಿ ಭಾರತದಲ್ಲಿ ಸಮರ ಸಾರಲು ಮುಂದಾದ. ಅದಕ್ಕಾಗಿ ಅಜೀಜ್ಗೆ ಶೇಖ್ 9.5 ಲಕ್ಷ ರೂ. ಕಳುಹಿಸಿದ್ದ. ಹವಾಲಾ ಮೂಲಕ ಅಜೀಜ್ ಮಾವನಿಗೆ ಆ ಹಣ ವರ್ಗಾವಣೆ ಆಗಿತ್ತು.
ಸೌದಿ ಅರೇಬಿಯಾದ ತೈಲ ನಿಕ್ಷೇಪವನ್ನು ಸ್ಫೋಟಿಸುವ ಸಂಚು ರೂಪಿಸಿದ್ದಕ್ಕೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಅಜೀಜ್, ಫೆಬ್ರವರಿ 2ರಂದು ಭಾರತಕ್ಕೆ ಗಡಿಪಾರಾಗಿದ್ದಾನೆ. ಆಂಧ್ರ ಪ್ರದೇಶದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪವನ್ನೂ ಈತ ಎದುರಿಸುತ್ತಿದ್ದಾನೆ.