ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ (ಕೃಪೆ ಪಿಟಿಐ)
ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾದ ಜವಾಹರ್ಲಾಲ್ ನೆಹರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ತಮ್ಮನ್ನು ಕನಯ್ಯಾ ಕುಮಾರ್ ಜತೆ ಆರ್ಕೆ ಪುರಂ ಪೊಲೀಸ್ ಠಾಣೆಯಲ್ಲಿರಿಸಬೇಕೆಂದು ಬೇಡಿಕೆಯೊಡ್ಡಿದ್ದಾರೆ. ಇಷ್ಟೇ ಅಲ್ಲ ತಮಗೆ ಒಂದು ಪ್ಯಾಕೆಟ್ ಸಿಗರೇಟ್ ಮತ್ತು ದಿನಪತ್ರಿಕೆಗಳನ್ನು ಪೂರೈಸಬೇಕೆಂಬುದು ಈ ವಿದ್ಯಾರ್ಥಿಗಳ ಬೇಡಿಕೆಯಾಗಿದೆ.
ತಾನು ಸಿಕ್ಕಾಪಟ್ಟೆ ಸಿಗರೇಟ್ ಸೇದುವ ವ್ಯಕ್ತಿ ಎಂದು ಉಮರ್ ಖಾಲಿದ್ ಪೊಲೀಸರಲ್ಲಿ ಹೇಳಿದ್ದಾನೆ. ತಾನು ಶರಣಾಗುವುದಕ್ಕಿಂತ ಸ್ವಲ್ಪ ಮುನ್ನ ಸಿಗರೇಟ್ ಸೇದಿದ್ದೆ ಎಂದು ಖಾಲಿದ್ ಹೇಳಿದ್ದನು. ಆದಾಗ್ಯೂ, ಸಿಗರೇಟ್ ಬೇಡಿಕೆಯನ್ನು ಪೊಲೀಸರು ನಿರಾಕರಿಸಿದ್ದಾರೆ. ಗುರುವಾರ ಮಧ್ಯಾಹ್ನ ತಮಗೆ ಜೆಎನ್ಯು ಕ್ಯಾಂಪಸ್ನ ಕ್ಯಾಂಟೀನ್ ನಲ್ಲಿರುವ ಮೊಮೋಸ್ ಮತ್ತು ಬಿರಿಯಾನಿ ಬೇಕೆಂದು ಈ ವಿದ್ಯಾರ್ಥಿಗಳು ಬೇಡಿಕೆಯೊಡ್ಡಿದ್ದರು. ಈ ಬೇಡಿಕೆಯನ್ನೂ ನಿರಾಕರಿಸಿದ ಪೊಲೀಸರು ಹತ್ತಿರದ ಹೋಟೆಲ್ನಿಂದ ಊಟ ತಂದುಕೊಟ್ಟಿದ್ದರು. ಇವರಿಬ್ಬರಿಗೂ ಹಿಂದಿ ದಿನಪತ್ರಿಕೆಯನ್ನು ಪೂರೈಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೇಸು ದಾಖಲಿಸಲು ಸಾಕ್ಷಿಯಾಗಿ ಬಳಸಿದ ವೀಡಿಯೋದಲ್ಲಿರುವವರ ಬಗ್ಗೆ ಕೇಳಿದ ಪ್ರಶ್ನೆಗೆ ಖಾಲಿದ್ ಉತ್ತರಿಸಿದ್ದು, ಕೆಲವರ ಹೆಸರನ್ನು ಬಹಿರಂಗ ಪಡಿಸಿದ್ದಾನೆ. ಏತನ್ಮಧ್ಯೆ, ಅಫ್ಜಲ್ ಗುರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಹೊರಗಿನವರಾಗಿದ್ದಾರೆ. ಅವರ್ಯಾರೂ ವಿದ್ಯಾರ್ಥಿಗಳಲ್ಲ ಎಂದು ಖಾಲಿದ್ ಹೇಳಿದ್ದಾನೆ. ಆದರೆ ಕಾಶ್ಮೀರವನ್ನು ಸ್ವತಂತ್ರವಾಗಿಸುತ್ತೇವೆ ಎಂದು ಭಾಷಣ ಮಾಡಿರುವುದಾಗಿ ಖಾಲಿದ್ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಬಲ್ಲಮೂಲಗಳು ಹೇಳಿವೆ. ಆದರೆ ಈ ವಿಷಯದ ಬಗ್ಗೆ ಸ್ಪಷ್ಟವಾದ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿಲ್ಲ.
ಉಮರ್ ಖಾಲಿದ್, ಅನಿರ್ಬನ್ ಮತ್ತು ಕನಯ್ಯಾ ಕುಮಾರ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಈ ಮೂವರ ಹೇಳಿಕೆಗಳನ್ನು ತಾಳೆ ಮಾಡಿ ನೋಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಅಷ್ಟೇ ಅಲ್ಲದೆ ತಮಗೆ ಹೊರ ರಾಷ್ಟ್ರಗಳಿಂದ ದೇಣಿಗೆ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದು, ಇವರಿಗೆ ಮಾವೋವಾದಿಗಳ ಸಂಪರ್ಕವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos