ಪಠಾಣ್ ಕೋಟ್ ದಾಳಿ: ಉಗ್ರ ಸಂಘಟನೆ ವಿರುದ್ಧ ಕ್ರಮಕ್ಕೆ ಪಾಕ್'ಗೆ ಭಾರತ ಆಗ್ರಹ
ನವದೆಹಲಿ: ಪಠಾಣ್ ಕೋಟ್ ಉಗ್ರರ ದಾಳಿ ವಿರುದ್ಧ ಕಿಡಿಕಾರಿರುವ ಭಾರತ ಉಗ್ರ ಸಂಘಟನೆ ವಿರುದ್ಧ 72 ಗಂಟೆಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿದೆ.
ಉಗ್ರರ ದಾಳಿ ವಿಷಯವನ್ನು ಪಾಕಿಸ್ತಾನ ಸರ್ಕಾರದೊಂದಿಗೆ ಚರ್ಚೆ ನಡೆಸುವ ಕುರಿತಂತೆ ಭಾರತ ಈಗಾಗಲೇ ಚಿಂತನೆ ನಡೆಸಿದ್ದು, ಸೇನಾ ವಾಯು ನೆಲೆ ದಾಳಿ ನಡೆಸಿದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ 72 ಗಂಟೆಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉಗ್ರ ಸಂಘಟನೆ ವಿರುದ್ಧ ಈಗಾಗಲೇ ಮಾಹಿತಿಗಳನ್ನು ಕಲೆ ಹಾಕಿರುವ ಗುಪ್ತಚರ ಇಲಾಖೆಯು ದಾಳಿ ಹಿಂದೆ ಜೈಶ್-ಇ-ಮೊಹಮ್ಮದ್ ಸಂಘಟನೆ ಕೈವಾಡವಿರುದ್ಧ ಖಾತರಿಪಡಿಸಿದೆ. ಹೀಗಾಗಿ ಈ ಉಗ್ರ ಸಂಘಟನೆ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಆಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಉಗ್ರರ ದಾಳಿಯ ಪರಿಣಾಮ ಇದೀಗ ಭಾರತ-ಪಾಕಿಸ್ತಾನದ ನಡುವಿನ ಶಾಂತಿ ಮಾತುಕತೆ ಮೇಲೆ ಬೀರಿದ್ದು, ಭಯೋತ್ಪಾದನೆ ಮತ್ತು ಮಾತುಕತೆ ಎರಡು ಒಟ್ಟಾಗಿ ಹೋಗಲು ಸಾಧ್ಯವಿಲ್ಲ. ಉಗ್ರ ಸಂಘಟನೆ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳದೇ ಹೋದರು ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದ ಮೂರು ದಿನಗಳಿಂದಲೂ ವಾಯುನೆಲೆ ಮೇಲೆ ದಾಳಿಯನ್ನು ಮುಂದುವರೆಸಿರುವ ಉಗ್ರರು ಈ ವರೆಗೂ 7ಯೋಧರನ್ನು ಬಲಿಪಡೆದಿದ್ದಾರೆ. ನಿನ್ನೆ ಕೂಡ ಇಬ್ಬರು ಉಗ್ರರು ಅಡಗಿ ಕುಳಿತಿರುವುದಾಗಿ ಹೇಳಲಾಗುತ್ತಿತ್ತು. ಇದರಂತೆ ವಾಯುನೆಲೆಯಲ್ಲಿ ಗುಂಡಿನ ಮೊರೆತ ಕೇಳಿಬರುತ್ತಿತ್ತು.
ಇದರಂತೆ ಕಾರ್ಯಾಚರಣೆಗಿಳಿದಿದ್ದ ಯೋಧರು ಓರ್ವ ಉಗ್ರರನನ್ನು ಸದೆ ಬಡಿದಿದ್ದರು. ಮತ್ತೋರ್ವ ಉಗ್ರನನ್ನು ಜೀವಂತವಾಗಿ ಹಿಡಿಯಲು ಕಾರ್ಯಾಚರಣೆ ಮುಂದುವರೆಸಿದ್ದರು. ಇದೀಗ ಮತ್ತೆ ವಾಯುನೆಲೆ ಮೇಲೆ ದಾಳಿ ಮುಂದುವರೆಸಿರುವ ಉಗ್ರರು ವಾಯುನೆಲೆಯ ಒಳಗೆ ಅವಿತು ಸ್ಪೋಟಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಇದೀಗ ಉಗ್ರರಿಗಾಗಿ ಭಾರತೀಯ ಯೋಧರು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, 100 ಕ್ಕೂ ಹೆಚ್ಚು ಯೋಧರು ಶೋಧನಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos