ವಯನಾಡು: ಇಂದುಲೇಖ ಸೋಪ್ ಹಚ್ಚಿದರೂ ತ್ವಚೆ ಬೆಳ್ಳಗಾಗಿಲ್ಲ, ಆದ್ದರಿಂದ ನನಗೆ ನಷ್ಟ ಪರಿಹಾರ ನೀಡಬೇಕೆಂದು ಕೋರಿ ಕೇರಳದ ವ್ಯಕ್ತಿಯೊಬ್ಬರು ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಇವರ ದೂರನ್ನು ಪರಿಗಣಿಸಿದ ನ್ಯಾಯಾಲಯ ರು. 30000 ಪರಿಹಾರ ಧನ ನೀಡುವಂತೆ ಇಂದುಲೇಖ ಕಂಪನಿಗೆ ಆದೇಶಿಸಿದೆ.
ಇಂದುಲೇಖ ವೈಟ್ ಸೋಪ್ ಜಾಹೀರಾತಿನಲ್ಲಿ ಮಲಯಾಳಂನ ಖ್ಯಾತ ನಟ ಮಮ್ಮೂಟಿ ಕಾಣಿಸಿಕೊಳ್ಳುತ್ತಿದ್ದು, ಇಂದುಲೇಖ ಸೋಪ್ ಹಚ್ಚಿದರೆ ತ್ವಚೆ ಬೆಳ್ಳಗಾಗುತ್ತದೆ ಎಂದು ಜಾಹೀರಾತಿನಲ್ಲಿ ವಾಗ್ದಾನ ನೀಡಲಾಗಿತ್ತು. ಆದರೆ ಇಂದುಲೇಖ ವೈಟ್ ಸೋಪ್ ಹಚ್ಚಿಯೂ ತನ್ನ ತ್ವಚೆ ಬೆಳ್ಳಗಾಗಿಲ್ಲ ಎಂದು ಕೇರಳದ ವಯನಾಡ್ ಜಿಲ್ಲೆಯ 67ರ ಹರೆಯದ ಕೆ. ಚಾತು ಎಂಬವರು ದೂರು ಸಲ್ಲಿಸಿದ್ದರು. ಇಷ್ಟು ಮಾತ್ರವಲ್ಲ ಸುಳ್ಳೇ ಸುಳ್ಳು ವಾಗ್ದಾನ ನೀಡಿದ್ದಕ್ಕಾಗಿ ಇಂದುಲೇಖ ಕಂಪನಿ ಮತ್ತು ನಟ ಮಮ್ಮೂಟಿ ನನಗೆ ರು. 50000 ಪರಿಹಾರ ಧನ ನೀಡಬೇಕೆಂದು ವಾದಿಸಿದ್ದರು.
ಚಾತು ಅವರ ದೂರನ್ನು ಪರಿಗಣಿಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯವು ರು. 30,000 ಪರಿಹಾರ ಧನ ನೀಡುವಂತೆ ಇಂದುಲೇಖ ಕಂಪನಿಗೆ ಆದೇಶಿಸಿದೆ.
ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಚಾತು ಅವರು, ಟೀವಿಯಲ್ಲಿ ಇಂದುಲೇಖದ ಜಾಹೀರಾತು ನೋಡಿಕೊಂಡೇ ಈ ಸೋಪು ಖರೀದಿಸಿ ಬಳಸಿದ್ದೆ. ಜಾಹೀರಾತಿನಲ್ಲಿ ಮಮ್ಮೂಟಿ ಇರುವುದರಿಂದ ಈ ಸೋಪ್ ಪರಿಣಾಮಕಾರಿಯಾಗಿರಬಹುದೆಂದು ಭಾವಿಸಿದ್ದೆ. ಕಳೆದ ಒಂದು ವರ್ಷದಿಂದ ಈ ಸೋಪ್ ಬಳಸುತ್ತಿದ್ದರೂ, ತ್ವಚೆಯ ಬಣ್ಣದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.
ಆದಾಗ್ಯೂ, ಜಾಹೀರಾತಿನಲ್ಲಿ ಮಮ್ಮೂಟಿ, ಸೌಂದರ್ಯ ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದು ಹೇಳುತ್ತಾರೆ. ಆದರೆ ಈ ಸೋಪ್ ಅಂಥದ್ದೇನೂ ಮಾಡಿಲ್ಲ. ಇಂಥಾ ಸುಳ್ಳು ಭರವಸೆ ನೀಡಿದ್ದಕ್ಕಾಗಿಯೇ ನಾನು ಕಾನೂನಿನ ಮೆಟ್ಟಿಲು ಏರಿದ್ದೆ.
ಇಂದುಲೇಖ ಒಂದು ಉದಾಹರಣೆ ಮಾತ್ರ. ಇಂಥದ್ದೇ ಅದೆಷ್ಟೋ ವಸ್ತುಗಳು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡುತ್ತವೆ. ಇವುಗಳ ಬಗ್ಗೆ ಜನರು ಪ್ರತಿಕ್ರಿಯಿಸಬೇಕು ಎಂದು ಚಾತು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos