ನವದೆಹಲಿ: ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ತೆರಳುವ ಸ್ಥಿತಿಯಲ್ಲಿಲ್ಲದ ಕೇರಳದ ವೃದ್ಧ ದಂಪತಿಗೆ ಮನೆಯಲ್ಲೇ ನೋಂದಣಿಗೆ ವ್ಯವಸ್ಥೆ ಮಾಡುವ ಮೂಲಕ ಪ್ರಧಾನಿ ಕಾರ್ಯಾಲಯ ಶ್ಲಾಘನೆಗೆ ಪಾತ್ರವಾಗಿದೆ.
ಕೇರಳದ ಪಾಲಕ್ಕಾಡ್ ನಿವಾಸಿ ರಾಜಶಿವರಾಮ್ ಎಂಬುವವರು ತಮ್ಮ ವೃದ್ಧ ಹೆತ್ತವರಿಗಾಗಿ ಆಧಾರ್ ಮಾಡಿಸಲು ಹಲವು ತಿಂಗಳಿಂದ ಪರದಾಡುತ್ತಿದ್ದ. ಅವರ ತಂದೆಗೆ 90 ವರ್ಷ ವಯಸ್ಸಾಗಿದ್ದರೆ, ತಾಯಿಗೆ 83 ವರ್ಷ ವಯಸ್ಸಾಗಿತ್ತು. ಏಳಲೂ ಆಗದೇ ನಡೆದಾಡಲೂ ಆಗದೆ ಹಾಸಿಗೆ ಹಿಡಿದಿದ್ದ ಆ ವೃದ್ಧ ದಂಪತಿ ಆಧಾರ್ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆಯುವರೆ ಎಂಬ ಬಗ್ಗೆ ಶಿವಮಾರ್ ಹಲವು ಬಾರಿ ಹಲವರಿಗೆ ಮನವಿ ಮಾಡಿದ್ದರು. ನಾನಾ ಮಾರ್ಗಗಳ ಮೂಲಕ ಪ್ರಯತ್ನಿಸಿ ಫಲಸಿಗದೆ, ರೋಸಿ ಹೋಗಿದ್ದರು. ಕೊನೆಗೆ ನೆರವು ನೀಡುವಂತೆ ಶಿವರಾಮ್ ಅವರು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಪತ್ರ ಬರೆದ ಮೂರೇ ದಿನಗಳಲ್ಲಿ ಅವರ ಸಮಸ್ಯೆ ಬಗಹರೆದಿದೆ.
ಈ ಬಗ್ಗೆ ತಮ್ಮ ಅನುಭವವನ್ನು ಶಿವರಾಮ್ ಅವರು ಹಂಚಿಕೊಂಡಿದ್ದು, ಕಳೆದ ಗುರುವಾರ (ಜ.21) ಪ್ರಧಾನಿ ಕಾರ್ಯಾಲಯಕ್ಕೆ ಇ ಮೇಲ್ನಲ್ಲಿ ಕೋರಿಕೆ ಸಲ್ಲಿಸಿ ಆಧಾರ್ ಗಾಗಿ ಮನವಿ ಮಾಡಿದ್ದೆ. ‘ಜ.21ರಂದು ಇ ಮೇಲ್ ಮಾಡಿದ ನಿಮಿಷದ ಒಳಗೆ ದೂರು ಸ್ವೀಕರಿಸಿರುವುದಾಗಿ ದೂರು ಸಂಖ್ಯೆ ಸಹಿತ ಪ್ರಧಾನಿ ಕಾರ್ಯಾಲಯದಿಂದ ಉತ್ತರ ಬಂತು. ನಂತರ ಕೇವಲ24 ಗಂಟೆಗಳ ಒಳಗೆ ಬೆಂಗಳೂರಿನ ಆಧಾರ್ ವ್ಯವಸ್ಥೆ ನಿರ್ವಹಣಾ ಕೇಂದ್ರದಿಂದ 4 ಕರೆಗಳು ಬಂದವು. ಮನೆ ವಿಳಾಸ ಸೇರಿ ಕೆಲ ಮಾಹಿತಿಗಳನ್ನು ನನ್ನಿಂದ ಪಡೆದುಕೊಂಡರು. ಶನಿವಾರ (ಜ.23) ಕರೆ ಮಾಡಿದ ಸ್ಥಳೀಯ ಆಧಾರ್ ಕೇಂದ್ರದ ಸಿಬ್ಬಂದಿ ಭಾನುವಾರ 11 ಗಂಟೆಗೆ ಮನೆಗೆ ಬರುವುದಾಗಿ ತಿಳಿಸಿದರು. ಭಾನುವಾರ ಬೆಳಗ್ಗೆ ಕಂಪ್ಯೂಟರ್, ವೆಬ್ಕ್ಯಾಮ್, ಬೆರಳಚ್ಚು ಯಂತ್ರ, ಕಣ್ಣಿನ ಸ್ಕ್ಯಾನರ್ ಹೀಗೆ ಅಗತ್ಯ ಸಲಕರಣೆಗಳೊಂದಿಗೆ ಆಗಮಿಸಿದ ಸಿಬ್ಬಂದಿ ಅವುಗಳನ್ನು ಅಳವಡಿಸಿ ತಂದೆ ಮತ್ತು ತಾಯಿಯ ಮಾಹಿತಿಯನ್ನು ಪಡೆದುಕೊಂಡರು. ವಾರದಲ್ಲಿ ಆಧಾರ್ ಕಾರ್ಡ್ನ ಆನ್ಲೈನ್ ಪ್ರತಿ ನೀಡುವುದಾಗಿ ತಿಳಿಸಿರುವ ಅವರು, ತಿಂಗಳೊಳಗೆ ಆಧಾರ್ ಕಾರ್ಡ್ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶಿವರಾಮ್ ಹೇಳಿದ್ದಾರೆ.
6.8 ಲಕ್ಷ ದೂರು ಪರಿಹಾರ: ಜಿತೇಂದ್ರ ಸಿಂಗ್
2015ರಲ್ಲಿ ಸರ್ಕಾರಕ್ಕೆ 8 ಲಕ್ಷ ದೂರುಗಳು ಬಂದಿವೆ. ಅವುಗಳಲ್ಲಿ 6.8 ಲಕ್ಷ ದೂರುಗಳನ್ನು ಪರಿಹರಿಸಲಾಗಿದ್ದು, ಇನ್ನುಳಿದವು ತಾಂತ್ರಿಕ ಕಾರಣಗಳಿಂದ ಪರಿಹಾರ ಕಂಡಿಲ್ಲ ಎಂದು ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಸಾಮಾನ್ಯವಾಗಿ ವಾರ್ಷಿಕ 2 ಲಕ್ಷ ದೂರುಗಳು ಬರುತ್ತಿದ್ದವು. ಎನ್ ಡಿಎ ಸರ್ಕಾರದ ಅವಧಿಯಲ್ಲಿ ಸರ್ಕಾರದ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಿದ್ದು, ದೂರು ಪ್ರಮಾಣ ನಾಲ್ಕು ಪಟ್ಟು ಏರಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.